
ಬೆಂಗಳೂರು, ಫೆ. 12– ರಾಜಕೀಯ ಸಂಘಟನಾ ಚತುರ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ಹಾಗೂ ಜನತಾದಳ (ಯು) ಮುಖಂಡ ಡಾ. ಜೀವರಾಜ್ ಆಳ್ವ (54) ಇಂದು ಸಂಜೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ಮಧ್ಯಾಹ್ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಇಂದು ಸಂಜೆ 6.30ರ ವೇಳೆಗೆ ಆಳ್ವ ಅವರು ಮೃತರಾದರು ಎಂದು ಪ್ರಕಟಿಸಿದರು.
ಬಾಬ್ರಿ ಮಸೀದಿ: ಅಡ್ವಾಣಿ, ಜೋಷಿ, ಉಮಾ ವಿಚಾರಣಾ ಅಧಿಸೂಚನೆ ರದ್ದು
ಲಖನೌ, ಫೆ. 12 (ಪಿಟಿಐ)– ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಉಮಾ ಭಾರತಿ ಸೇರಿದಂತೆ ಎಂಟು ಮಂದಿ ಆರೋಪಿಗಳ ವಿಚಾರಣೆ ನಡೆಸುವಂತೆ ಹೊರಡಿಸಿರುವ ಅಧಿಸೂಚನೆ ‘ದೋಷಪೂರಿತ’ ಎಂದು ಹೇಳುವ ಮೂಲಕ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು ಇಂದು ಅಧಿಸೂಚನೆಯನ್ನು ತಳ್ಳಿಹಾಕಿತು.
ಪ್ರಕರಣದಲ್ಲಿ ಆರೋಪಿಗಳಾಗಿರುವವರ ವಿರುದ್ಧ ಆರೋಪಪಟ್ಟಿ ದಾಖಲಿಸಲು ನ್ಯಾಯಾಲಯಕ್ಕೆ ಹಾಜರಾಗಲು ಕೋರಿದ್ದ ಆದೇಶವನ್ನು ಪೀಠವು ಎತ್ತಿ ಹಿಡಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.