
25 ವರ್ಷಗಳ ಹಿಂದೆ ಈ ದಿನ
ಕಾಶ್ಮೀರ: ಕದನ ವಿರಾಮದ ಮೊದಲ ದಿನವೇ 16 ಸಾವು
ಶ್ರೀನಗರ, ನ. 28 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಒಂದು ತಿಂಗಳ ಕದನ ವಿರಾಮದ ಮೊದಲ ದಿನವಾದ ಇಂದು, ವಿವಿಧ ಕಡೆ ನಡೆದ ಹಿಂಸಾಚಾರಗಳಲ್ಲಿ ರಕ್ಷಣಾ ಪಡೆಯ ಐವರು, ಎಂಟು ಉಗ್ರರು ಸೇರಿದಂತೆ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಕೇಂದ್ರ ಸರ್ಕಾರವು ರಂಜಾನ್ ಅವಧಿಯಲ್ಲಿ ಏಕಪಕ್ಷೀಯವಾಗಿ ಘೋಷಣೆ ಮಾಡಿದ ಕದನ ವಿರಾಮಕ್ಕೆ ಉಗ್ರ ಸಂಘಟನೆಗಳು ಯಾವುದೇ ಅನುಕೂಲಕರ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂಬುದು ಇಂದಿನ ಘಟನಾವಳಿಗಳಿಂದ ಸ್ಪಷ್ಟಪಟ್ಟಂತಾಗಿದೆ.
ಮೆಕ್ಕೆಜೋಳ ಖರೀದಿ ಷರತ್ತು ಸಡಿಲಿಸಲು ಕೇಂದ್ರ ಅಸ್ತು
ನವದೆಹಲಿ, ನ. 28– ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಭತ್ತದ ಖರೀದಿಗೆ ಭಾರತೀಯ ಆಹಾರ ನಿಗಮ ನಿಗದಿಪಡಿಸಿರುವ ಗುಣಮಟ್ಟದ ಷರತ್ತುಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ರಾಜ್ಯದ ಸರ್ವಪಕ್ಷಗಳ ನಿಯೋಗ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಎದುರಿಸುತ್ತಿರುವ ಸಮಸ್ಯೆ ವಿವರಿಸಿ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದಾಗ ಸಚಿವರು ಈ ಆಶ್ವಾಸನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.