ಶಾಲು ಎಸೆದ ಮಮತಾಗೆ ಸ್ಪೀಕರ್ ಸಂಗ್ಮಾ ಎಚ್ಚರಿಕೆ
ನವದೆಹಲಿ, ಮಾ. 13– ಸಭಾಧ್ಯಕ್ಷರ ಪೀಠದ ಮುಂಭಾಗದ ಅಂಗಳಕ್ಕೆ ಬಂದು ಸಚಿವರ ಜತೆ ವಾಗ್ವಾದಕ್ಕಿಳಿದು, ತಮ್ಮ ಆದೇಶವನ್ನು ಕಡೆಗಣಿಸಿದ ಕಾಂಗ್ರೆಸ್ ಸದಸ್ಯೆ ಮಮತಾ ಬ್ಯಾನರ್ಜಿ ಅವರನ್ನು ಸಿಟ್ಟಿಗೆದ್ದ ಸಂಗ್ಮಾ ಅವರು ‘ಸದನದಿಂದ ಹೊರಗೆ ಹೋಗಿ’ ಎಂದು ಎಚ್ಚರಿಕೆ ನೀಡುವ ಮೂಲಕ ಅವರನ್ನು ಹೊರಗೆ ಕಳುಹಿಸಿದ ಅಪರೂಪದ ಘಟನೆ ಇಂದು ಲೋಕಸಭೆಯಲ್ಲಿ ನಡೆಯಿತು.
ಸಭಾಧ್ಯಕ್ಷ ಸಂಗ್ಮಾ ಅವರ ಆದೇಶಕ್ಕೆ ಕೋಪಗೊಂಡು ಮಮತಾ ಅವರೂ ಹೊರನಡೆಯುವಾಗ ತಮ್ಮ ಮೈಮೇಲಿದ್ದ ಕಪ್ಪು ಶಾಲನ್ನು ಸಚಿವರತ್ತ ಬೀಸಾಡಿ ಹೋದುದು ತೀರಾ ಅಪರೂಪದ ಘಟನೆ ಎನಿಸಿತು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ
ಬೆಂಗಳೂರು, ಮಾ. 13– ರಾಜ್ಯದ ಜನತಾದಳ ಸರ್ಕಾರ ಬಸ್ ಪ್ರಯಾಣದರ ಏರಿಸಿರುವುದನ್ನು ಪ್ರತಿಭಟಿಸಿ ಇಂದು ಮಧ್ಯಾಹ್ನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ, ವಾಟರ್ಜೆಟ್ನಿಂದ ನೀರು ಹೊಡೆದಾಗ ಪರಿಸ್ಥಿತಿ ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳುವ ಸಂದರ್ಭ ನಿರ್ಮಾಣವಾಯಿತು.
ಲಾಠಿ ಪ್ರಹಾರ ಹಾಗೂ ‘ಜಲ ದಾಳಿ’ಯಿಂದ ಚಳವಳಿಗಾರರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಠಿಣವಾದಾಗ, ಯಾವುದೇ ಕ್ಷಣದಲ್ಲಿ ಚಳವಳಿಗಾರರ ಮೇಲೆ ಇನ್ನೂ ಹೆಚ್ಚಿನ ಬಲ ಪ್ರಯೋಗಿಸಬಹುದು ಎಂಬ ಮುನ್ಸೂಚನೆ ಅರಿತ ಕಾಂಗ್ರೆಸ್ ಮುಖಂಡರು ತಾವೇ ಬಂಧನಕ್ಕೆ ಒಳಗಾಗುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.