ಭೀಕರ ರೈಲು ಡಿಕ್ಕಿ 60ಕ್ಕೂ ಹೆಚ್ಚು ಸಾವು
ಸೇಲಂ, ಮೇ 15 (ಪಿಟಿಐ, ಯುಎನ್ಐ)– ಇಲ್ಲಿಂದ ಸುಮಾರು 30 ಕಿ.ಮೀ. ದೂರದ ಡ್ಯಾನಿಷ್ಪೇಟೆ ಮತ್ತು ಲೊಕ್ಕೂರು ಮಧ್ಯೆ ನಿನ್ನೆ ಮಧ್ಯರಾತ್ರಿ ಮದ್ರಾಸ್– ಕನ್ಯಾಕುಮಾರಿ ಎಕ್ಸ್ಪ್ರೆಸ್ ರೈಲು ಹಾಗೂ ಎದುರಿನಿಂದ ಬರುತ್ತಿದ್ದ ಇನ್ನೊಂದು ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ 60ಕ್ಕೂ ಹೆಚ್ಚು ಪ್ರಯಾಣಿಕರು ಸತ್ತರು. ಈ ದುರ್ಘಟನೆಯಲ್ಲಿ ಇತರ 65ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಈವರೆಗೆ ಒಟ್ಟು 55 ದೇಹಗಳನ್ನು ಹೊರತೆಗೆಯಲಾಗಿದೆ. ಇನ್ನಷ್ಟು ಜನ ಉರುಳಿಬಿದ್ದ ಬೋಗಿಗಳ ಮಧ್ಯೆ ಸಿಕ್ಕಿ
ಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿಯಿದೆ. ಸತ್ತವರಲ್ಲಿ ಐವರು ಮಹಿಳೆಯರು ಹಾಗೂ ಮೂವರು ಮಕ್ಕಳು.
ಭಾಷಾ ಅಕಾಡೆಮಿ ಸ್ಥಾಪನೆ ಇಲ್ಲ
ಬೆಂಗಳೂರು, ಮೇ 15– ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾದರಿಯಲ್ಲಿ ರಾಜ್ಯದಲ್ಲಿ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವ ಯಾವುದೇ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ.ಸಿ.ನಾಣಯ್ಯ ಇಂದು ಇಲ್ಲಿ ಸ್ಪಷ್ಟಪಡಿಸಿದರು.
ವಿವಿಧ ಅಕಾಡೆಮಿಗಳ ಬದಲಿಗೆ ಭಾಷಾ ಅಕಾಡೆಮಿಯೊಂದನ್ನು ಸ್ಥಾಪಿಸಿ ಆ ಮೂಲಕ ನಾಡಿನ ವಿಭಿನ್ನ ಭಾಷೆ– ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಅಪೇಕ್ಷೆಯನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.