ಷರೀಫ್ ರಾಜೀನಾಮೆ: ಪಕ್ಷದಲ್ಲಿ ಅತೃಪ್ತಿಯ ಹೊಗೆ
ನವದೆಹಲಿ, ನ. 23– ಬಾಬ್ರಿ ಮಸೀದಿಯನ್ನು ರಕ್ಷಿಸಲಿಲ್ಲ ಎನ್ನುವ ಕಾರಣಕ್ಕೆ ಈಗಾಗಲೇ ಕಾಂಗ್ರೆಸ್ಸಿನಿಂದ ದೂರ ಸರಿದಿರುವ ಮುಸ್ಲಿಮರ ವಿಶ್ವಾಸ ಗಳಿಸುವ ಬದಲು ಸಿ.ಕೆ.ಜಾಫರ್ ಷರೀಫ್ ಅವರಿಗಿದ್ದ ರೈಲ್ವೆ ಖಾತೆಯನ್ನು ಕಿತ್ತುಕೊಂಡು ಕೊನೆಗೆ ಅವರೇ ರಾಜೀನಾಮೆ ನೀಡುವಂತೆ ಮಾಡಿದರೆನ್ನಲಾದ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಕ್ರಮಕ್ಕೆ ಇಲ್ಲಿ ಪಕ್ಷದಲ್ಲಿಯೇ ದಟ್ಟವಾದ ಅಸಮಾಧಾನ ಕಂಡು ಬರುತ್ತಿದೆಯಾದರೂ ಅದನ್ನು ಬಹಿರಂಗಗೊಳಿಸಲು ಹಿಂಜರಿಯುತ್ತಿದ್ದಾರೆ.
ನರಸಿಂಹರಾವ್ ಅವರು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೆ ಪ್ರಿಯವಾಗಿದ್ದರೆನ್ನಲಾದವರನ್ನು ಹಿರಿಯ ಕಿರಿಯರೆನ್ನದೆ ದೂರ ಮಾಡುತ್ತಿರುವುದು ಮೆಚ್ಚುವ ಕ್ರಮವಲ್ಲ ಎಂಬುದಾಗಿ ಹಿರಿಯ ಸಚಿವರೊಬ್ಬರು ಅನೌಪಚಾರಿಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಪಂಚಾಯಿತಿ ಅಧ್ಯಕ್ಷರಿಗೆ ಅಧಿಕಾರ– ಸುಗ್ರೀವಾಜ್ಞೆ ರಾಜ್ಯಪಾಲರಿಗೆ
ಬೆಂಗಳೂರು, ನ. 23– ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಗೆ ಸಂಪೂರ್ಣ ಕಾರ್ಯನಿರ್ವಾಹಕ ಅಧಿಕಾರವನ್ನು ನೀಡುವ ಸಂಬಂಧದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿದೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ 1985ರಲ್ಲಿ ಜನತಾ ಪಕ್ಷ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನೀಡಿದ್ದ ಅಧಿಕಾರವನ್ನು ಪುನಃ ನೀಡುವ ಉದ್ದೇಶ ಇದರ ಹಿಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.