ರಾಜೀನಾಮೆಗೆ ಆಗ್ರಹ 3ನೇ ದಿನವೂ ಕಲಾಪಕ್ಕೆ ಅಡ್ಡಿ
ನವದೆಹಲಿ, ಡಿ. 8 (ಪಿಟಿಐ)– ‘ದೂರಸಂಪರ್ಕ ಹಗರಣ’, ಮೂರನೇ ದಿನವಾದ ಇಂದೂ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಭಾರಿ ಕೋಲಾಹಲಕ್ಕೆ ಕಾರಣವಾಯಿತಲ್ಲದೆ ರಾಜ್ಯಸಭೆಯ ಕಲಾಪ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಎರಡೂ ಸದನಗಳಲ್ಲಿ ಪ್ರತಿಪಕ್ಷದ ಸದಸ್ಯರು ಸಂಪರ್ಕ ಖಾತೆ ಸಚಿವ ಸುಖ್ರಾಂ ಅವರನ್ನು ಸಂಪುಟದಿಂದ ತಕ್ಷಣ ವಜಾ ಮಾಡಬೇಕೆಂದು ಪಟ್ಟು ಹಿಡಿದಿದ್ದರಿಂದ ಭೋಜನ ವಿರಾಮದವರೆಗೆ ಯಾವುದೇ ಕಲಾಪ ನಡೆಯಲಿಲ್ಲ.
ಮದ್ಯಾಭಿಷೇಕ ಪ್ರಕರಣ ನ್ಯಾಯಾಂಗ ತನಿಖೆಗೆ ನಿರ್ಧಾರ
ಬೆಂಗಳೂರು, ಡಿ. 8– ಡಾ. ಅಂಬೇಡ್ಕರ್ ಪ್ರತಿಮೆ ಅಪವಿತ್ರಗೊಳಿಸಿದ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ಇಂದು ಇಲ್ಲಿ ತೀರ್ಮಾನಿಸಿತು.
ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆಯಾಗಿದ್ದ ಬಿ.ಟಿ. ಲಲಿತಾ ನಾಯಕ್ ಅವರ ಪುತ್ರ ಸೇರಿದಂತೆ ಏಳು ಮಂದಿ ನಗರದ ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಅಪವಿತ್ರಗೊಳಿಸಿದ ಆಪಾದನೆ ಹಿನ್ನೆಲೆಯಲ್ಲಿ ಸಂಪುಟ ಈ ನಿರ್ಧಾರ ತೆಗೆದುಕೊಂಡಿದೆ.
ಬಿಡಿಎ ಬಿಡಿ ನಿವೇಶನ ಹಂಚಿಕೆ ನೀತಿ ನಿರೂಪಣೆಗೆ ಸಂಪುಟ ಸಮಿತಿ
ಬೆಂಗಳೂರು, ಡಿ. 8– ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಸರ್ಕಾರ ಹೆಚ್ಚು ‘ಪಾರದರ್ಶಕ’ ಆಗಿರುವ ಉದ್ದೇಶದೊಂದಿಗೆ ಹೊಸದಾಗಿ ರೀತಿ ನೀತಿಗಳನ್ನು ರೂಪಿಸುವ ಸಲುವಾಗಿ ಸಚಿವ ಸಂಪುಟದ ಉಪ ಸಮಿತಿಯನ್ನು ತಮ್ಮ ನೇತೃತ್ವದಲ್ಲಿ ರಚಿಸಲಾಗಿದೆ ಎಂದು ಸಚಿವ ಸಂಪುಟ ಸಭೆಯ ನಂತರ ವಾರ್ತಾ ಸಚಿವ ಎಂ.ಸಿ. ನಾಣಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.