ADVERTISEMENT

25 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 20:13 IST
Last Updated 6 ಜುಲೈ 2019, 20:13 IST

ಗುತ್ತಿಗೆ ನೌಕರರ ನಿಷೇಧ ಕಾನೂನು‘ನಿಂತ ನೀರು’

ಬೆಂಗಳೂರು, ಜುಲೈ 6– ಪ್ರಮುಖವಾಗಿ ಖಾಸಗೀ ಕ್ಷೇತ್ರದಲ್ಲಿ ಕಾಯಂ ಆಗಿ ನೌಕರರನ್ನು ನೇಮಿಸಿಕೊಳ್ಳುವ ಅನಿವಾರ್ಯ ಇದ್ದರೂ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಂಡು ಶೋಷಿಸುವುದನ್ನು ನಿಷೇಧಿಸುವ ಕಾನೂನು ರಾಜ್ಯ ಸರ್ಕಾರದ ಆಮೆ ನಡಿಗೆಯ ಕಾರ್ಯ ವೈಖರಿಯಿಂದಾಗಿ ನಿಂತ ನೀರಾಗಿದೆ.

ಸಾರ್ವಜನಿಕ ಹಾಗೂ ಖಾಸಗೀ ಕ್ಷೇತ್ರಗಳಲ್ಲಿ, ಅದರಲ್ಲೂ ಖಾಸಗೀ ಕೈಗಾರಿಕೆಗಳಲ್ಲಿ ‘ಗುತ್ತಿಗೆ’ ಆಧಾರದ ಮೇಲೆ ನೌಕರರನ್ನು ‘ಆರು ಕಾಸು ಕೊಡುವ ಕಡೆ ಮೂರು ಕಾಸು ಕೊಟ್ಟು’ ಅಗ್ಗದ ವೇತನ ನಿಗದಿ ಮಾಡಿ ನೇಮಿಸಿಕೊಳ್ಳುವ ಜಾಡ್ಯ ರಾಜ್ಯ ಸರ್ಕಾರದಲ್ಲಿ ವ್ಯಾಪಕವಾಗಿ ಹಬ್ಬಿದೆ ಎಂಬುದನ್ನು ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿ ಮೂಲಗಳು ದೃಢಪಡಿಸುತ್ತದೆ.

ADVERTISEMENT

ಕೈಗಾ ರಾಷ್ಟ್ರೀಯ ಚರ್ಚೆಗೆ ಆಗ್ರಹ

ಕಾರವಾರ, ಜುಲೈ 6– ಕೈಗಾ ಅಣು ವಿದ್ಯುತ್ ಯೋಜನೆಯಿಂದ ಯಾವುದೇ ದುರಂತ ಸಂಭವಿಸಲು ಸಾಧ್ಯವಿಲ್ಲ ಎಂದು ಅಣು ವಿಜ್ಞಾನಿಗಳು ಜನಸಮೂಹಕ್ಕೆ ಮನವರಿಕೆ ಮಾಡಿಕೊಟ್ಟರೆ ತಾವು ಅಣುಶಕ್ತಿಯನ್ನು ವಿರೋಧಿಸುವುದಿಲ್ಲ ಎಂದು ಶ್ರೀ ಪೇಜಾವರ ಸ್ವಾಮಿಗಳು ಇಂದು ಇಲ್ಲಿ ತಿಳಿಸಿದರು.

ಕೈಗಾ ಅಣುವಿದ್ಯುತ್ ಯೋಜನೆ ವಿರೋಧಿ ಹೋರಾಟ ಸಮಿತಿಯವರು ‘ಕೈಗಾ ಚಲೋ’ ಕಾರ್ಯಕ್ರಮದ ಅಂಗವಾಗಿ ಇಂದು ಇಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಕೈಗಾ ಯೋಜನೆಯ ನಿರ್ಮಾಣ ಕಾರ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಿ ರಿಯಾಕ್ಟರ್ ಗುಮ್ಮಟ ಕುಸಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಚರ್ಚೆಯಾಗಬೇಕು ಎಂದು ಅವರು ಹೇಳಿದರು.

ಹಣದುಬ್ಬರ ಹತೋಟಿಗೆ ಕೇಂದ್ರ ಕ್ರಮ

ಶಿಮ್ಲಾ, ಜುಲೈ 6 (ಯುಎನ್‌ಐ)– ಕಬ್ಬು ಮತ್ತು ಹತ್ತಿ ಬೆಳೆಗಳ ವೈಫಲ್ಯದಿಂದ ತೀವ್ರವಾಗಿ ಏರಿದ್ದ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಕೇಂದ್ರ ಹಣಕಾಸು ಸಚಿವ ಡಾ. ಮನಮೋಹನ ಸಿಂಗ್ ಇಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.