17 ರಾಜ್ಯಗಳಲ್ಲಿ ಇಂದು ಪ್ರಚಾರ ಕಾರ್ಯ ಅಂತ್ಯ
ನವದೆಹಲಿ, ಏ. 29 (ಪಿಟಿಐ, ಯುಎನ್ಐ)– ಎರಡನೇ ಹಂತದ ಲೋಕಸಭಾ ಚುನಾವಣೆಗೆ 17 ರಾಜ್ಯಗಳಲ್ಲಿ ರಂಗ ಸಜ್ಜಾಗಿದ್ದು, ನಾಳೆ ಸಂಜೆ ಬಹಿರಂಗ ಪ್ರಚಾರ ಕೊನೆಗೊಳ್ಳುವುದರಿಂದ ಇಂದು ವಿವಿಧ ರಾಜಕೀಯ ಪಕ್ಷಗಳ ನಾಯಕರು ಭರದಿಂದ ಪ್ರಚಾರ ನಡೆಸಿದರು. ಎರಡನೇ ಹಂತದಲ್ಲಿ 204 ಲೋಕಸಭಾ ಸ್ಥಾನಗಳಿಗೆ ಮತ್ತು 223 ವಿಧಾನಸಭಾ ಕ್ಷೇತ್ರಗಳಿಗೆ ಮೇ 2ರಂದು ಮತದಾನ ನಡೆಯಲಿದೆ.
ಪ್ರಧಾನಿ ಪಿ.ವಿ.ನರಸಿಂಹ ರಾವ್, ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ, ಜನತಾದಳದ ನಾಯಕರಾದ ಬಿಜು ಪಟ್ನಾಯಕ್, ರಾಮ್ ವಿಲಾಸ್ ಪಾಸ್ವಾನ್, ಮೇನಕಾ ಗಾಂಧಿ, ಇಂದಿರಾ ಕಾಂಗ್ರೆಸ್ ಅಧ್ಯಕ್ಷ ಎನ್.ಡಿ.ತಿವಾರಿ, ಲೋಕಸಭಾ ಅಧ್ಯಕ್ಷ ಶಿವರಾಜ್ ಪಾಟೀಲ್, ಉಪಾಧ್ಯಕ್ಷ ಎಸ್.ಮಲ್ಲಿಕಾರ್ಜುನಯ್ಯ, ಕೇಂದ್ರದ ಮಾಜಿ ಸಚಿವ ಕುಮಾರಮಂಗಳಂ ಅವರ ರಾಜಕೀಯ ಭವಿಷ್ಯ ಈ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.
ಮತದಾರರ ಹೆಸರು ನಾಪತ್ತೆ ವಿವಾದ: ಶೇಷನ್ ಗಮನಕ್ಕೆ
ಬೆಂಗಳೂರು, ಏ. 29– ‘ಬೆಂಗಳೂರು ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಮರು ಮತದಾನ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕೆ ಪರಿಹಾರ ಏನೂ ಇಲ್ಲ. ಈಗಿನ ಮತದಾರರ ಪಟ್ಟಿಯೇ ಮತದಾರರ ಪಟ್ಟಿ’ ಎಂದು ಮುಖ್ಯ ಚುನಾವಣಾ ಕಮಿಷನರ್ ಟಿ.ಎನ್.ಶೇಷನ್ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
‘ದೇಶದ ಯಾವುದೇ ಕ್ಷೇತ್ರದಲ್ಲಿ ಮುಂದೆ ಈ ರೀತಿ ಆಗದಂತೆ ಒಂದು ಹೊಸ ವಿಧಾನವನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಆಲೋಚಿಸಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.