ಬಂಧಿತ ಚಂದ್ರಸ್ವಾಮಿ ತಿಹಾರ್ ಜೈಲಿಗೆ
ನವದೆಹಲಿ, ಮೇ 3 (ಪಿಟಿಐ, ಯುಎನ್ಐ)– ವಂಚನೆ ಪ್ರಕರಣದಲ್ಲಿ ಶಾಮೀಲಾಗಿ, ಬಹುದಿನಗಳ ನಿರೀಕ್ಷೆಯಂತೆ ನಿನ್ನೆ ರಾತ್ರಿ ಹಠಾತ್ತಾಗಿ ಬಂಧನಕ್ಕೊಳಗಾದ, ಪ್ರತಿಷ್ಠಿತ ರಾಜಕಾರಣಿಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ತಿರುಗಾಡುತ್ತಿದ್ದ ವಿವಾದಾಸ್ಪದ ಸಾಧು ಚಂದ್ರಸ್ವಾಮಿ ಅವರನ್ನು ಇಂದು ತಿಹಾರ್ ಸೆರೆಮನೆಗೆ ಕಳುಹಿಸಲಾಯಿತು.
ನಿನ್ನೆ ರಾತ್ರಿ ಮದ್ರಾಸಿನಲ್ಲಿ ಬಂಧನಕ್ಕೊಳಗಾದ ಚಂದ್ರಸ್ವಾಮಿ ಹಾಗೂ ಅವರ ಕಾರ್ಯದರ್ಶಿ ಕೈಲಾಸ್ನಾಥ್ ಅಗರ್ವಾಲ್ ಅವರನ್ನು ಸಿಬಿಐ ಅಧಿಕಾರಿಗಳು ಇಂದು ದೆಹಲಿ ಮೆಟ್ರೊಪಾಲಿಟನ್ ಕೋರ್ಟಿನ ಮುಂದೆ ಹಾಜರುಪಡಿಸಿದಾಗ, ನ್ಯಾಯಾಧೀಶರು ಆರೋಪಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸುವಂತೆ ಆದೇಶ ನೀಡಿದರು.
ದಳದ ಅಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ
ಬೆಂಗಳೂರು, ಮೇ 3– ಪ್ರದೇಶ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತಾವು ನಿರ್ಧರಿಸಿರುವುದಾಗಿ ಸಿ.ಎಂ.ಇಬ್ರಾಹಿಂ ಇಂದು ತಿಳಿಸಿದರು.
ಪಕ್ಷದ ಬಗೆಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯ ಸಮಿತಿ ಸಭೆ ಕರೆಯಬೇಕೆಂಬ ರಾಮಕೃಷ್ಣ ಹೆಗಡೆ ಅವರ ಸೂಚನೆಯನ್ನು ತಾವು ತಳ್ಳಿಹಾಕಿದುದಾಗಿ ಪ್ರಕಟವಾಗಿರುವುದು ಮತ್ತು ಇದರಿಂದಾಗಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳುವುದು ಸರಿಯಲ್ಲ, ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.