ಸಂಗ್ಮಾ ಅವಿರೋಧ ಆಯ್ಕೆ
ನವದೆಹಲಿ, ಮೇ 23– ತ್ರಿಶಂಕು ಸ್ಥಿತಿಯ ಹನ್ನೊಂದನೇ ಲೋಕಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ಪಕ್ಷದ ಪಿ.ಎ.ಸಂಗ್ಮಾ ಅವರು ಇಂದು ಸರ್ವಾನುಮತದಿಂದ ಆಯ್ಕೆಯಾದರು.
ನೂತನ ಸ್ಪೀಕರ್ ಆಯ್ಕೆಗಾಗಿ ಎಲ್ಲರೂ ಹಾಜರಿದ್ದು ಸ್ಪೀಕರ್ ಆಯ್ಕೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ಲವಲವಿಕೆ ಮತ್ತು ಉತ್ಸಾಹ ಕಾಣಿಸಿಕೊಂಡಿತು.
ಆಳುವ ಪಕ್ಷವು ಸ್ಪೀಕರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದು ವಾಡಿಕೆ. ಆದರೆ, ಬಹುಮತವಿಲ್ಲದ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರ ಆ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಿ ಮುಖಭಂಗ ಎದುರಿಸುವ ಸಾಹಸವನ್ನು ಪ್ರಾಮಾಣಿಕವಾಗಿ ಕೈಬಿಟ್ಟಿದ್ದರಿಂದ, ಸಂಯುಕ್ತ ರಂಗದ ಬೆಂಬಲ ಪಡೆದ ಕಾಂಗ್ರೆಸ್ನ ಸಂಗ್ಮಾ ಅವರ ಆಯ್ಕೆ ಒಮ್ಮತದಿಂದ ನಡೆಯಿತು.
ಸಂಗ್ಮಾ ಅವರನ್ನು ಒಮ್ಮತದಿಂದ ಆಯ್ಕೆ ಮಾಡುವ ನಿರ್ಣಯವನ್ನು ಡಿಎಂಕೆ ನಾಯಕ ಮುರಸೋಳಿ ಮಾರನ್ ಮಂಡಿಸಿದಾಗ ಐದು ಮಂದಿ ಕಾಂಗ್ರೆಸ್ಸಿಗರು ಮತ್ತು ಏಳು ಮಂದಿ ಸಂಯುಕ್ತ ರಂಗದ ಸದಸ್ಯರು ಅನುಮೋದಿಸಿದರು.
ಅವಿಶ್ವಾಸ ನಿರ್ಣಯ: ಚರ್ಚೆಗೆ ನಕಾರ
ನವದೆಹಲಿ, ಮೇ 23 (ಪಿಟಿಐ, ಯುಎನ್ಐ)– ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಸಂಯುಕ್ತ ರಂಗ ಮಂಡಿಸಲು ಉದ್ದೇಶಿಸಿರುವ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ಆರಂಭಿಸಲು ನೂತನ ಲೋಕಸಭಾ ಅಧ್ಯಕ್ಷ ಪಿ.ಎ.ಸಂಗ್ಮಾ ಅವರು ಅವಕಾಶ ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.