ಅವಿಶ್ವಾಸ ನಿರ್ಣಯಕ್ಕೆ ಸೋಲು
ಬೆಂಗಳೂರು, ಆ. 9– ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರ ನೇತೃತ್ವದ ಜನತಾ ದಳ ಸರ್ಕಾರದ ವಿರುದ್ಧ ಬಿಜೆಪಿ ಮಂಡಿಸಿದ ಅವಿಶ್ವಾಸ ನಿರ್ಣಯ ಇಂದು ವಿಧಾನಸಭೆಯಲ್ಲಿ ತಿರಸ್ಕೃತವಾಯಿತು.
ನಿರ್ಣಯದ ಪರ 38 ಮತ್ತು ವಿರುದ್ಧ 96 ಮತಗಳು ದೊರೆತವು. ಬಿಜೆಪಿ ಮಾಡಿದ ಪ್ರತಿಯೊಂದು ಆರೋಪಕ್ಕೂ ಮುಖ್ಯಮಂತ್ರಿ ಅವರ ತಿರುಗೇಟು, ದಾಖಲೆ ಪತ್ರಗಳನ್ನು ಹಿಡಿದು ನೀಡಿದ ಉತ್ತರಗಳ ನಡುವೆ ವಾಗ್ಯುದ್ಧ, ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ ಹಾಗೂ ಭಾರೀ ಗದ್ದಲ ನಡೆಯಿತು.
ಸ್ವಜನ ಪಕ್ಷಪಾತ, ಅವ್ಯವಹಾರ, ರುಷುವತ್ತು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಜಾತಿ ಆಧಾರದ ಮೇಲೆ ನೇಮಕಾತಿ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಅನ್ಯಾಯ ಮುಂತಾಗಿ ಬಿಜೆಪಿ ಮಾಡಿದ ಹತ್ತಾರು ಆರೋಪಗಳಿಗೆ ಚುಚ್ಚು ಮಾತಿನಲ್ಲೇ ಉತ್ತರ ನೀಡಿದ ಮುಖ್ಯಮಂತ್ರಿ ದೇವೇಗೌಡ ಅವರು ಎಲ್ಲವನ್ನೂ ತಳ್ಳಿಹಾಕಿದರು.
ಗ್ರಾಹಕರ ಶೋಷಣೆ ಎಸ್.ಟಿ.ಡಿ ವೈಖರಿ
ಬೆಂಗಳೂರು, ಆ. 9– ಸಾರ್ವಜನಿಕರಿಗೆ ಹೆಚ್ಚಿನ ದೂರವಾಣಿ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ದೂರವಾಣಿ ಇಲಾಖೆ ನೀಡಿರುವ ಎಸ್.ಟಿ.ಡಿ (ಗ್ರಾಹಕ ಟ್ರಂಕ್ ಡಯಲಿಂಗ್) ಹಾಗೂ ಅಂತರರಾಷ್ಟ್ರೀಯ ಗ್ರಾಹಕ ಟ್ರಂಕ್ ಡಯಲಿಂಗ್ (ಐ.ಎಸ್.ಡಿ) ಸ್ಥಳೀಯ ಕರೆಗಳ ಬಹಳಷ್ಟು ಕೇಂದ್ರಗಳು ನಾಗರಿಕರ ಶೋಷಣೆಯ ಕೇಂದ್ರಗಳಾಗಿ ಪರಿಣಮಿಸಿವೆ.
ಈ ಹಿನ್ನೆಲೆಯಲ್ಲಿ ದೂರವಾಣಿ ಇಲಾಖೆ ಕೂಡ ತೀವ್ರ ಗಮನ ಹರಿಸಿದ್ದು, ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಹಣವನ್ನು ಈ ಕೇಂದ್ರಗಳು ವಸೂಲಿ ಮಾಡುತ್ತಿರುವುದರ ವಿರುದ್ಧ ಕೂಡಲೇ ಆ ವಿಭಾಗದ ವಿಭಾಗೀಯ ಎಂಜಿನಿಯರ್ಗಳಿಗೆ ದೂರು ನೀಡುವಂತೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.