ವೃತ್ತಿ ಶಿಕ್ಷಣ: ಕನ್ನಡಿಗರಿಗೇ ಮೀಸಲು ನಿಯಮ ರದ್ದು
ನವದೆಹಲಿ, ಆ. 11– ರಾಜ್ಯದ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಪೇಮೆಂಟ್ (ಅಧಿಕ ಶುಲ್ಕ) ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡುವ ಕರ್ನಾಟಕ ಸರ್ಕಾರದ ನಿಯಮಾವಳಿಯನ್ನು ಸುಪ್ರೀಂ ಕೋರ್ಟ್ ಇಂದು ರದ್ದುಪಡಿಸಿದೆ.
ಕರ್ನಾಟಕದಲ್ಲಿ 10 ವರ್ಷ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮಾತ್ರ ವೃತ್ತಿ ಶಿಕ್ಷಣದ ಪೇಮೆಂಟ್ ಸೀಟ್ಗೆ ಅರ್ಹರು ಎಂದು ರಾಜ್ಯ ಸರ್ಕಾರ ಎಂಜಿನಿಯರಿಂಗ್, ವೈದ್ಯ, ದಂತ ವೈದ್ಯ, ಔಷಧ ಶಾಸ್ತ್ರ ಮತ್ತು ನರ್ಸಿಂಗ್ ಪ್ರವೇಶ ನಿಯಮಕ್ಕೆ ಮಾಡಿದ ತಿದ್ದುಪಡಿಯನ್ನು 1995–96ರ ಶೈಕ್ಷಣಿಕ ವರ್ಷಕ್ಕೆ ಅನ್ವಯಿಸುವಂತಿಲ್ಲ ಎಂದು ನ್ಯಾಯಮೂರ್ತಿ ಕುಲ್ದೀಪ್ ಸಿಂಗ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಇಂದು ನೀಡಿದ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ.
‘ಸರ್ಕಾರದ ಮುಂದೆ ಕೈಯೊಡ್ಡಬೇಡಿ’
ಬೆಂಗಳೂರು, ಆ. 11– ಕವಿ, ಬರಹಗಾರರು ತಮ್ಮ ಸ್ವಂತಕ್ಕಾಗಿ ಸರ್ಕಾರ ಅಥವಾ ಮಂತ್ರಿಮಾನ್ಯರ ಮುಂದೆ ಹೋಗಿ ‘ದೇಹೀ’ ಎಂದು ಯಾಚಿಸುವುದಕ್ಕೆ ಸುಪ್ರಸಿದ್ಧ ಕವಿ ಡಾ. ಕೆ.ಎಸ್.ನರಸಿಂಹಸ್ವಾಮಿ ಇಂದು ಇಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ತನ್ನದೇ ಆದ ಸಾಮಾಜಿಕ ಹೊಣೆಗಾರಿಕೆಗಳು ಇರುತ್ತವೆ. ಅವು ಅನುಷ್ಠಾನಗೊಂಡಾಗ ಎಲ್ಲರಿಗೂ
ಅನುಕೂಲವಾಗುವಂತೆ ಕವಿ, ಬರಹಗಾರರಿಗೂ ಆಗುತ್ತದೆ; ಅಲ್ಲಿಯವರೆಗೆ ಕಾಯಬೇಕು ಎಂದು ಅವರು ಈ ಪೀಳಿಗೆಯ ಬರಹಗಾರರಿಗೆ ಕಿವಿಮಾತು ಹೇಳಿದರು.
ಎಂಬತ್ತಕ್ಕೆ ಕಾಲಿರಿಸಿರುವ ಈ ಕವಿಯ ಬದುಕಿನ ಕುರಿತು ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ತಯಾರಿಸಿದ ಸಾಕ್ಷ್ಯಚಿತ್ರದ ಬಿಡುಗಡೆ ಸಮಾರಂಭದಲ್ಲಿ ಅವರು ತಮ್ಮ ಪತ್ನಿಯೊಂದಿಗೆ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.