ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ಅನಿರ್ದಿಷ್ಟ ಮುಂದಕ್ಕೆ
ಬೆಂಗಳೂರು, ಜ. 6– ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವು ಇಂದು ರದ್ದುಪಡಿಸಿದೆ. ಈ ಚುನಾವಣೆ ನಿಗದಿಯಾಗಿದ್ದಂತೆ ಈ ತಿಂಗಳ 17ರಂದು ನಡೆಯಬೇಕಾಗಿತ್ತು.
ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರಾಜ್ಯದಾದ್ಯಂತ ಉದ್ಭವಿಸಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದ ರಕ್ಷಣಾ ಕಾರ್ಯಕ್ಕೆ ಅಗತ್ಯ ಪೊಲೀಸ್ ಸಿಬ್ಬಂದಿ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ಫೆಬ್ರುವರಿ ಕೊನೆ ವಾರದವರೆವಿಗೆ ಚುನಾವಣೆ ಮುಂದೂಡಬೇಕೆಂಬ ಸರ್ಕಾರದ ಕೋರಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
‘ರ್ಯಾಂಡಿ’ಯ ಬೆಂಗಳೂರು ನಂಟು
ನವದೆಹಲಿ, ಜ. 6 (ಪಿಟಿಐ)– ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ವಿಮಾನದಿಂದ ಭಾರಿ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರ ಎಸೆದ ಪ್ರಕರಣದ ಇಬ್ಬರು ‘ಮುಖ್ಯ ಸಂಚುಕೋರರನ್ನು’ ಸಿಬಿಐ ಇಂದು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಈ ನಿಗೂಢ ಪ್ರಕರಣದ ಪತ್ತೆಯಲ್ಲಿ ಗಮನಾರ್ಹ ಮುನ್ನಡೆ ಸಾಧ್ಯವಾಗಿದೆ.
ಈ ಇಬ್ಬರು ಸಂಚುಕೋರರು ಬೆಂಗಳೂರಿನ ತಪ್ಪು ವಿಳಾಸ ನೀಡಿ ಪಾಸ್ಪೋರ್ಟ್ ಪಡೆದ ಸತ್ಯನಾರಾಯಣ ಗೌಡ ಅಲಿಯಾಸ್ ರ್ಯಾಂಡಿ ಮತ್ತು ದೇವಮಾಣಿಕ್ಯಂ ಆನಂದ ಅಲಿಯಾಸ್ ದೀಪಕ್ ಎಂದು ಸಿಬಿಐ ವಕ್ತಾರರು ತಿಳಿಸಿದರು.
ಇವರಿಬ್ಬರೂ ತಲೆತಪ್ಪಿಸಿಕೊಂಡಿದ್ದು ಇವರ ಪತ್ತೆಗೆ ರಾಷ್ಟ್ರವ್ಯಾಪಿ ಎಚ್ಚರಿಕೆ ನೋಟಿಸ್ ಹೊರಡಿಸಲಾಗಿದೆ. ವಿಮಾನ ನಿಲ್ದಾಣ ಮತ್ತು ಬಂದರು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಲಾಗಿದೆ. ರ್ಯಾಂಡಿಯ ಇತ್ತೀಚಿನ ಭಾವಚಿತ್ರ ಸಿಬಿಐಗೆ ಲಭ್ಯವಾಗಿದೆ.
ರ್ಯಾಂಡಿ ಅಲಿಯಾಸ್ ಸತ್ಯನಾರಾಯಣ ಗೌಡ ಬೆಂಗಳೂರು ಪಾಸ್ಪೋರ್ಟ್ ಕಚೇರಿಯಿಂದ ಕಳೆದ ಜೂನ್ 29ರಂದು ಪಾಸ್ಪೋರ್ಟ್ (ಕ್ರಮಾಂಕ ಆರ್ 458418) ಪಡೆದುಕೊಂಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.