ಕಾವೇರಿ: ಸತತ ಮಾತುಕತೆ– ಪ್ರಧಾನಿ ಪರಿಹಾರ ಸೂತ್ರ ಸಂಭವ
ನವದೆಹಲಿ, ಡಿ. 31– ತೀರಾ ಜಟಿಲವಾಗಿರುವ ಕಾವೇರಿ ಜಲ ವಿವಾದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆ ಆರಂಭಿಸಿರುವ ಪ್ರಧಾನಿ
ಪಿ.ವಿ.ನರಸಿಂಹ ರಾವ್ ಅವರು ಇಂದು ಕರ್ನಾಟಕ ಮತ್ತು ತಮಿಳುನಾಡಿನ ಕಾಂಗ್ರೆಸ್ ಮುಖಂಡರು ಮತ್ತು ದೇವೇಗೌಡ, ಜಯಲಲಿತಾ ಸೇರಿ ನದಿ ಪಾತ್ರದಲ್ಲಿನ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ತಮ್ಮ ಮೊದಲ ಆದ್ಯತೆ ಯಾವುದೇ ರಾಜ್ಯಗಳ ಬೆಳೆ ಹಾಳಾಗದಂತೆ ರಕ್ಷಿಸುವುದು ಎಂದು ಪ್ರಧಾನಿ ಆಶ್ವಾಸನೆ ನೀಡಿದರು. ದೇವೇಗೌಡ ಮತ್ತು ಜಯಲಲಿತಾ ಅವರು ಪ್ರಧಾನಿಯವರ ಸಲಹೆ ಒಪ್ಪಿಕೊಂಡರೆ ನಾಳೆ ಸಂಜೆಯ ವೇಳೆಗೆ ಎರಡೂ ರಾಜ್ಯಗಳಿಗೆ ಸಮ್ಮತವಾಗುವ ಪರಿಹಾರ ಸೂತ್ರ ಹೊರಬೀಳುವ ಸಾಧ್ಯತೆಯಿದೆ.
ಗೊಬ್ಬರ ದರ ಏರಿಕೆ: ಇಂದಿನಿಂದ ಜಾರಿ
ಬೆಂಗಳೂರು, ಡಿ. 31– ಕೇಂದ್ರ ಸರ್ಕಾರದ ಸಹಾಯಧನ ಯೋಜನೆಯಲ್ಲಿ ಸಂಯುಕ್ತ ಗೊಬ್ಬರಗಳಿಗೆ ಗರಿಷ್ಠ ಮಾರಾಟ ದರ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ದರಕ್ಕಿಂತ ಶೇಕಡ ಒಂದರಿಂದ ಆರರಷ್ಟು ದರ ಹೆಚ್ಚಳ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.