ಕಾವೇರಿ: ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಅರ್ಜಿ ತಿರಸ್ಕೃತ
ನವದೆಹಲಿ, ಡಿ. 14– ತುರ್ತಾಗಿ 30 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕೆಂಬ ತಮಿಳುನಾಡಿನ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿತು. ಆದರೆ, ಈ ಅರ್ಜಿಯನ್ನು ಕಾವೇರಿ ನ್ಯಾಯಮಂಡಲಿ ಮುಂದೆ ಸಲ್ಲಿಸುವಂತೆ ತಮಿಳುನಾಡಿಗೆ ಸೂಚಿಸಿತು.
ಕಾವೇರಿ ನೀರಿನ ಹಂಚಿಕೆ ವಿವಾದದ ಬಗೆಗೆ ಪದೇ ಪದೇ ನ್ಯಾಯಾಲಯದ ಕಟಕಟೆ ಹತ್ತುವ ಬದಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ತುರ್ತುಸ್ಥಿತಿಯ ಅವಶ್ಯಕತೆ ಅಥವಾ ಪರಸ್ಪರ ಹೊಂದಾಣಿಕೆಯಂತೆ ನೀರು ಹಂಚಿಕೆಯ ಉಸ್ತುವಾರಿಗಾಗಿ ತಜ್ಞರನ್ನೊಳಗೊಂಡ ಸ್ಥಾಯಿ ಸಮಿತಿಯೊಂದನ್ನು ರಚಿಸಿಕೊಳ್ಳಬೇಕು ಎಂದು ಸಹ ಕೋರ್ಟ್ ಸಲಹೆ ಮಾಡಿತು.
‘ಸಹಕಾರಿ ಸಂಘದಲ್ಲಿ ಸರ್ಕಾರಿ ಹಸ್ತಕ್ಷೇಪಕ್ಕೆ ಕಡಿವಾಣ’
ಬೆಂಗಳೂರು, ಡಿ. 14– ಸಹಕಾರ ಸಂಘಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರಿ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಸಲುವಾಗಿ ಸದಸ್ಯರ ನಾಮಕರಣ ಹಾಗೂ ಚುನಾವಣೆಗಳನ್ನು ಮುಂದೂಡಲು ಸರ್ಕಾರಕ್ಕೆ ಇರುವ ಅಧಿಕಾರವನ್ನು ತೆಗೆದುಹಾಕಲಾಗುವುದು ಎಂದು ಸಹಕಾರ ಸಚಿವ ಎಸ್.ಎಸ್. ಪಾಟೀಲ್ ಇಂದು ಇಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.