ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 04-10-1996

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 15:04 IST
Last Updated 3 ಅಕ್ಟೋಬರ್ 2021, 15:04 IST
   

ರಾಜ್ಯದಲ್ಲಿ ಶೀಘ್ರವೇ 4 ಹೊಸ ಜಿಲ್ಲೆ: ಪಟೇಲ್

ರಾಯಚೂರು, ಅ. 3– ನಾಲ್ಕು ಹೊಸ ಜಿಲ್ಲೆಗಳನ್ನು ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಹೇಳಿದರು.

ವಿಧಾನಸಭೆ ಉಪಚುನಾವಣೆಗಾಗಿ ಪಕ್ಷದ ಅಭ್ಯರ್ಥಿ ಪರ ಯಲ್ಬುರ್ಗದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ನಂತರ ಮುಖ್ಯ ಮಂತ್ರಿ ಅವರು ಯಲ್ಬುರ್ಗ ತಾಲ್ಲೂಕಿನ ಕುಕನೂರಿನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಈ ವಿಷಯ ತಿಳಿಸಿದರು. ಆದರೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯಾದೀತು ಎಂಬ ದೃಷ್ಟಿಯಿಂದ ಉದ್ದೇಶಿತ ಈ ಜಿಲ್ಲೆಗಳು ಯಾವುವು ಎಂಬುದನ್ನು ಹೇಳ ಬಯಸಲಿಲ್ಲ.

ADVERTISEMENT

ಹೊಸ ಜಿಲ್ಲೆಗಳನ್ನು ರಚಿಸುವುದಕ್ಕೆ ಸರ್ಕಾರದ ಕಾಲಮಿತಿ ಏನು ಎಂಬುದನ್ನೂ ಅವರು ತಿಳಿಸಲಿಲ್ಲ. ಕೊಪ್ಪಳ, ಬಾಗಲಕೋಟೆ, ಧಾರವಾಡ ದಕ್ಷಿಣ ಹಾಗೂ ದಾವಣಗೆರೆ ಜಿಲ್ಲೆಗಳನ್ನು ರಚಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಇರುವುದನ್ನು ಇಲ್ಲಿ ಸ್ಮರಿಸಬಹುದು.

ಸಮಸ್ಯೆ ತಂದ ಉತ್ತಮ ಫಸಲು

ಬೆಂಗಳೂರು, ಅ. 3– ರಾಜ್ಯದಲ್ಲಿ ಈ ಬಾರಿ ಭರ್ಜರಿ ಆಲೂಗಡ್ಡೆ ಬೆಳೆ ಬಂದಿದೆ. ಈರುಳ್ಳಿಯೂ ಅಷ್ಟೇ; ಜನಸಾಮಾನ್ಯರು ದಿನವೂ ಬಳಸುವ ಈ ತರಕಾರಿ ಉತ್ತಮ ಫಲಸು ಬಂದದ್ದು ಸಂತೋಷ ಬದಲು ಹಲವು ಸಮಸ್ಯೆಗಳನ್ನೇ ತಂದಿದೆ.

ರಾಜ್ಯ ಕೃಷಿ ಸಚಿವ ಸಿ. ಬೈರೇಗೌಡರ ಪ್ರಕಾರ ಒಟ್ಟು 47,500 ಹೆಕ್ಟೇರುಗಳಲ್ಲಿ 8.50 ಲಕ್ಷ ಟನ್ ಆಲೂಗಡ್ಡೆ ಬೆಳೆದಿದೆ. ಈರುಳ್ಳಿ ಬೆಳೆ 47,000 ಹೆಕ್ಟೇರುಗಳಲ್ಲಿ ಒಟ್ಟು 7 ಲಕ್ಷ ಟನ್‌ಗಳು.

‘ಭರ್ಜರಿ ಬೆಳೆ ಬಂದ ಕಾರಣ ಬೆಲೆ ಕುಸಿದು ರೈತರಿಗೆ ಅಸಲು ಕೂಡಾ ಹುಟ್ಟುತ್ತಿಲ್ಲ. ಅವರು ಆಲೂಗಡ್ಡೆಯನ್ನು ಕ್ವಿಂಟಲಿಗೆ ₹ 150 ಬೆಲೆಗೆ ಮಾರುವಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ರಫ್ತಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಅನುಮತಿ ಸದ್ಯವೇ ಬರಲಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.