ನವದೆಹಲಿ, ಅ. 24– ಉತ್ಸಾಹವೇ ಬತ್ತಿಹೋಗಿರುವ ಷೇರುಪೇಟೆಯಲ್ಲಿ ಮತ್ತೆ ನವಚೈತನ್ಯವನ್ನು ತರುವ ಉದ್ದೇಶದಿಂದ ಕಂಪೆನಿಗಳು ತಮ್ಮ ಷೇರುಗಳನ್ನು ಪೇಟೆಯಿಂದ ವಾಪಸು ಖರೀದಿ ಮಾಡುವುದಕ್ಕೆ ಅವಕಾಶವೂ ಸೇರಿದಂತೆ ಒಟ್ಟು ಎಂಟು ಅಂಶಗಳ ಮಹತ್ವದ ಯೋಜನೆಯನ್ನು ಪ್ರಧಾನಿ ಎ.ಬಿ.ವಾಜಪೇಯಿ ಇಂದು ಪ್ರಕಟಿಸಿದರು.
ಈಗ ಬೆಳವಣಿಗೆ ಕುಂಠಿತವಾಗಿರುವ ಅರ್ಥವ್ಯವಸ್ಥೆಯನ್ನು ಹುರಿದುಂಬಿಸಲು ಹೊಸ ಟೆಲಿಸಂಪರ್ಕ ನೀತಿ ಹಾಗೂ 28 ಸಾವಿರ ಕೋಟಿ ರೂಪಾಯಿ ವೆಚ್ಚದ ಆರು ಹೊಸ ಹೆದ್ದಾರಿಗಳ ನಿರ್ಮಾಣ ಇದರಲ್ಲಿ ಸೇರಿವೆ. ಮೂಲ ಸೌಲಭ್ಯ ಯೋಜನೆಗಳಲ್ಲಿ ಭಾರೀ ವೆಚ್ಚ ಮಾಡುವ ಉದ್ದೇಶದಿಂದ ಹೆದ್ದಾರಿಗಳನ್ನು ನಿರ್ಮಿಸಲಾಗುವುದು. ಹಾಗೂ ಐದು ನಗರಗಳಲ್ಲಿ ಸಂಪೂರ್ಣ ವಿದೇಶಿ ಬಂಡವಾಳದ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಲಾಗುವುದು ಎಂದು ವಾಜಪೇಯಿ ಅವರು ಭಾರತದ ಕೈಗಾರಿಕಾ ಸಂಘಗಳ ಒಕ್ಕೂಟದ (ಎಫ್ಐಸಿಸಿಐ) 71ನೇ ವಾರ್ಷಿಕ ಅಧಿವೇಶನದಲ್ಲಿ ಪ್ರಕಟಿಸಿದರು.
ಬೆಂಗಳೂರು, ಅ. 24– ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಜನತಾದಳದ ಭಿನ್ನಮತೀಯರ ಆಗ್ರಹದಂತೆ ಇದೇ ತಿಂಗಳು 28ಕ್ಕಿಂತ ಮುಂಚೆ ಜನತಾದಳದ ಶಾಸಕಾಂಗ ಪಕ್ಷದ ತುರ್ತುಸಭೆಯ ಕರೆಯಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದು ಇಲ್ಲಿ ಹೇಳಿದರು.
ಭಿನ್ನಮತೀಯರು ನಾಯಕತ್ವ ಬದಲಾವಣೆಯಾಗಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ನಂತರ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮುಖ್ಯಮಂತ್ರಿಯಗಳು, ಈಗಾಗಲೇ ನಿಗದಿಪಡಿಸಿರುವಂತೆ ವಿಧಾನಸಭೆ ಅಧಿವೇಶನ 29ರಂದು ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಮಹತ್ತರವಾದ ವಿಷಯಗಳು ಚರ್ಚೆಗೆ ಬರದೆ ಇರುವ ದಿನ ಶಾಸಕಾಂಗ ಪಕ್ಷದ ಸಭೆ ನಡೆಸಬಹುದಾಗಿದೆ ಎಂದು ಅವರು ಭೇಟಿ ಮಾಡಿದ ವರದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.