3ನೇ ಹಂತದ ಚುನಾವಣೆ ಶೇ 53 ಮತದಾನ
ನವದೆಹಲಿ, ಫೆ. 28 (ಪಿಟಿಐ, ಯುಎನ್ಐ)– ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಮನ್ ಮತ್ತು ದಿಯುಗಳ ಒಟ್ಟು 131 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮೂರನೆಯ ಹಂತದ ಮತದಾನದ ಸಮಯದಲ್ಲಿ ಅಲ್ಲಲ್ಲಿ ಸಂಭವಿಸಿದ ಹಿಂಸಾತ್ಮಕ ಘಟನೆಗಳಲ್ಲಿ 13 ಜನ ಸತ್ತಿದ್ದು ಒಟ್ಟಾರೆ ಶೇ 53ರಷ್ಟು ಮತದಾನವಾಗಿದೆ.
ಕೇರಳದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಸೇರಿದಂತೆ ಐವರು ಸತ್ತಿದ್ದು, ಬಿಹಾರದಲ್ಲಿ ನಡೆದ ಮರು ಮತದಾನದ ಅವಧಿಯಲ್ಲಿ ಸಂಭವಿಸಿದ ಹಿಂಸೆಗೆ ಮೂವರು ಬಲಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ಅವಧಿ ಮುಗಿಯುತ್ತಿದ್ದಂತೆ ಸಂಭವಿಸಿದ ಪ್ರತ್ಯೇಕ ಹಿಂಸಾತ್ಮಕ ಘಟನೆಗಳಲ್ಲಿ ಐವರು ಸತ್ತಿದ್ದು 20 ಮಂದಿ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ನ ಮೂವರು ಕಾರ್ಯಕರ್ತರು ಸೇರಿದ್ದಾರೆ.
ಜೈನ್ ಆಯೋಗದ ಅವಧಿ ವಿಸ್ತರಣೆಗೆ ನಕಾರ
ನವದೆಹಲಿ, ಫೆ. 28 (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಜೈನ್ ಆಯೋಗದ ಅವಧಿ ವಿಸ್ತರಿಸಲು ಸಂಯುಕ್ತರಂಗ ಸರ್ಕಾರ ಸಮ್ಮತಿಸಿಲ್ಲ.
ಜೈನ್ ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ಸಂಯುಕ್ತ ರಂಗ ಸರ್ಕಾರದ ಅಂಗಪಕ್ಷವಾದ ಡಿಎಂಕೆ ವಿರುದ್ಧ ದೋಷಾರೋಪ ಹೊರಿಸಿದ್ದರಿಂದ ಕಾಂಗ್ರೆಸ್ ಪಕ್ಷ ಬೆಂಬಲ ಹಿಂತೆಗೆದುಕೊಂಡು ಸರ್ಕಾರದ ಪತನಕ್ಕೆ ಕಾರಣವಾದುದನ್ನು ಸ್ಮರಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.