ADVERTISEMENT

25 ವರ್ಷಗಳ ಹಿಂದೆ: ಸೋಮವಾರ 10–11–1997

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 19:30 IST
Last Updated 9 ನವೆಂಬರ್ 2022, 19:30 IST
   

ಸೋಮಶೇಖರ್ ಪ್ರಕರಣ: ‘ನಿಖರವಾದ ಆಧಾರಗಳಿಲ್ಲ’
ಬೆಂಗಳೂರು, ನ. 9–
‘ಮಾಜಿ ಉನ್ನತ ಶಿಕ್ಷಣ ಸಚಿವ ಬಿ. ಸೋಮಶೇಖರ್ ಅವರು ಕಾನೂನು ಪದವಿ ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಡಿಬಾರ್ ಆಗಿದ್ದರು ಎಂಬ ಆರೋಪಗಳನ್ನು ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ನಿಖರವಾಗಿರುವ ಹೇಳಲು ಸಾಧ್ಯವಿಲ್ಲ‌’ ಎಂದು ಆರೋಪದ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ. ಶಿವಶಂಕರ್ ಭಟ್ ವಿಚಾರಣಾ ಆಯೋಗ ತಿಳಿಸಿದೆ.

1978ರಲ್ಲಿ ನಡೆದ ಕಾನೂನು ಪದವಿಯ ಮೊದಲ ವರ್ಷದ ಪರೀಕ್ಷೆಯಲ್ಲಿ ಸೋಮಶೇಖರ್ ಅವರು ಕಾ‍ಪಿ ಮಾಡಿದ್ದರು ಎಂಬ ಆರೋಪ ಸತ್ಯವೇ ಎಂಬುದರ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ಸೆ. 10ರಂದು ಆಯೋಗವನ್ನು ರಚಿಸಲಾಗಿತ್ತು.

ಸೋಮಶೇಖರ್ ಅವರು ಕಾಪಿ ಮಾಡಿದ್ದರೆ ಅಥವಾ ಇಲ್ಲವೇ ಎಂಬುದು ಸಾರ್ವಜನಿಕವಾಗಿ ಭಾರಿ ಮುಖ್ಯವಾದ ವಿಚಾರವೇನೂ ಅಲ್ಲ. ಒಂದು ವೇಳೆ ಕಾಪಿ ಮಾಡಿದ್ದಾರೆ ಎಂದು ಭಾವಿಸಿದರೂ ಅವರು ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಿರುತ್ತಾರೆ ಎಂದು ಆಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ADVERTISEMENT

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಿದ್ಧ: ಬಿ.ಎಸ್. ಯಡಿಯೂರಪ್ಪ
ಹುಬ್ಬಳ್ಳಿ, ನ. 9–
ರಾಜ್ಯ ಜನತಾದಳ ಸರ್ಕಾರದ ಆಂತರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ‘ಸಂದರ್ಭ ಬಂದಾಗ ಇತರ ಪಕ್ಷಗಳ ಜತೆಗೆ ಸಮ್ಮಿಶ್ರ ಸರ್ಕಾರ ರಚಿಸಲು ಬಿಜೆಪಿ ಸಿದ್ಧ’ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿ ಪ್ರಕಟಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ವಿರುದ್ಧ ಈಗ ಬಂಡಾಯದ ಗಾಳಿ ಎದ್ದಿದೆ. ದೇವೇಗೌಡ ಅವರು ಕೆಲ ಶಾಸಕರು ಹಾಗೂ ಸಚಿವರ ಪ್ರತ್ಯೇಕ ಸಭೆ ನಡೆಸಿ ಮುಖ್ಯಮಂತ್ರಿಯವರಿಗೆ ಅಪಾಯದ ಸಂಕೇತ ನೀಡಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರ ಅಸ್ಥಿರಗೊಂಡಿದೆ. ಈ ವಾತಾವರಣ ನಮ್ಮ ಪಕ್ಷಕ್ಕೆ ಅನುಕೂಲಕರವಾಗಿದೆ. ರಾಜಕೀಯ ಧ್ರುವೀಕರಣ ಸಂದರ್ಭ ಈಗ ಬಂದಿದೆ. ಅಂಥ ಪರಿಸ್ಥಿತಿ ಬಂದರೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.