ADVERTISEMENT

25 ವರ್ಷಗಳ ಹಿಂದೆ: ಶನಿವಾರ 06.04.1996

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST
   

ಬೆಂಗಳೂರು ಉತ್ತರ, ಕೆನರಾ, ಬಳ್ಳಾರಿ ಅಭ್ಯರ್ಥಿ ಬದಲು
ನವದೆಹಲಿ. ಏ. 5–
ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ವ್ಯಾಪಕವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ಈಗ ಬೆಂಗಳೂರು ಉತ್ತರ, ಬಳ್ಳಾರಿ, ಕೆನರಾ (ಕಾರವಾರ) ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಲು ತೀರ್ಮಾನಿಸಿದೆ.

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಉಪ ಚುನಾವಣೆಗೆ ಪೆರಿಕಲ್ ಮಲ್ಲಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಿದೆ. ಸ್ಥಳೀಯ ಲಿಂಗಾಯತರ ಒತ್ತಡದ ಮೇಲೆ ಬಳ್ಳಾರಿಗೆ ಕೆ.ಸಿ.ಕೊಂಡಯ್ಯ ಬದಲಿಗೆ ಮಾಜಿ ಸಂಸತ್ ಸದಸ್ಯ ಕೆ.ಎಸ್.ವೀರಭದ್ರಪ್ಪ ಮತ್ತು ಕಾರವಾರಕ್ಕೆ ಆರ್.ಎಸ್.ಭಾಗವತ ಅವರ ಬದಲಿಗೆ ಮಾಜಿ ಸಚಿವ ಆರ್.ಎನ್.ನಾಯಕ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.

ಚುನಾವಣಾ ವೆಚ್ಚ: ಅಭ್ಯರ್ಥಿಗೆ ಆಯೋಗದಿಂದ ಎಚ್ಚರಿಕೆ
ನವದೆಹಲಿ, ಏ. 5 (ಯುಎನ್ಐ)–
ಚುನಾವಣಾ ವೆಚ್ಚ ಮಿತಿಗೆ ಸಂಬಂಧಿಸಿದಂತೆ ಹಾಲಿ ಇರುವ ಕಾನೂನಿಗೆ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿ ಗಳು ಬದ್ಧರಾಗಬೇಕು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ADVERTISEMENT

ಲೋಕಸಭಾ ಅಭ್ಯರ್ಥಿಗೆ ಈಗ 4.51 ಲಕ್ಷ ರೂಪಾಯಿ ಚುನಾವಣಾ ವೆಚ್ಚ ಮಿತಿ ಹಾಕಿರುವುದು ಅವಾಸ್ತವ. ಈ ಮಿತಿಯನ್ನು 15 ಲಕ್ಷಕ್ಕೆ ಹೆಚ್ಚಿಸುವಂತೆ ಆಯೋಗವು ಫೆಬ್ರುವರಿಯಲ್ಲಿಯೇ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದುವರೆಗೆ ಯಾವ ಕ್ರಮ ಕೈಗೊಂಡಿಲ್ಲ ಎಂದು ಚುನಾವಣಾ ಕಮಿ ಷನರ್ ಜಿವಿಜಿ ಕೃಷ್ಣಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.