ಚುನಾವಣೆ: ಕಪ್ಪುಹಣ ತಡೆಗೆ ಕಠಿಣ ಕ್ರಮ
ನವದೆಹಲಿ, ಏ. 7 (ಪಿಟಿಐ, ಯುಎನ್ಐ)– ಚುನಾವಣಾ ವೆಚ್ಚದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಚುನಾವಣೆ ವೇಳೆ ಹಣದ ‘ದುರುಪಯೋಗ’ ಆಗುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಆಯೋಗ ಇಂದು ಆದೇಶಿಸಿದೆ. ಸಂಸತ್ ಸದಸ್ಯರ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸುವಂತೆ ಆಯುಕ್ತ ಡಾ. ಜಿ.ವಿ.ಜಿ. ಕೃಷ್ಣಮೂರ್ತಿ ಕೇಂದ್ರಕ್ಕೆ ಸಲಹೆ ಮಾಡಿದ್ದಾರೆ.
ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ಯಾಗುವುದನ್ನು ತಪ್ಪಿಸುವ ಯತ್ನವಾಗಿ ಆಯೋಗವು ಮುಖ್ಯ ಚುನಾವಣಾಧಿಕಾರಿ ಗಳು, ರಾಜಕೀಯ ಪಕ್ಷಗಳು, ಕಂದಾಯ ಕಾರ್ಯದರ್ಶಿಗಳು ಮತ್ತು ಚುನಾವಣಾ ವೆಚ್ಚ ಪರಿಶೀಲನಾ ವೀಕ್ಷಕರಿಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.
ಹಿಂದುತ್ವದ ಆಧಾರದಲ್ಲಿ ಸ್ಥಿರ ಸರ್ಕಾರ: ಬಿಜೆಪಿ ಭರವಸೆ
ನವದೆಹಲಿ, ಏ. 7 (ಪಿಟಿಐ, ಯುಎನ್ಐ)– ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ತಂದು ಹಿಂದುತ್ವ ಹಾಗೂ ಸ್ವದೇಶಿ ಆಧಾರದಲ್ಲಿ ಕೇಂದ್ರದಲ್ಲಿ ಶುದ್ಧ ಮತ್ತು ಪರಿಪೂರ್ಣ ಸರ್ಕಾರ ನೀಡುವುದಾಗಿ ಭಾರತೀಯ ಜನತಾ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ‘ಸುರಕ್ಷಾ, ಶುಚಿತ್ವ, ಸ್ವದೇಶಿ ಮತ್ತು ಸಾಮರಸ್ಯ’ ತತ್ವದ ಆಧಾರದಲ್ಲಿ ಈಗಿನ ಸರ್ಕಾರವನ್ನು ಕೆಳಗಿಳಿಸಿ ಶುದ್ಧ ಹಾಗೂ ಜವಾಬ್ದಾರಿಯುತ ಸರ್ಕಾರವನ್ನು ನೀಡುವುದಾಗಿ ಅಡ್ವಾಣಿ ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.