ಪ್ರಧಾನಿ ಹುದ್ದೆಗೆ ದೇವೇಗೌಡ– ತೃತೀಯ ರಂಗದ ಆಯ್ಕೆ
ನವದೆಹಲಿ, ಮೇ 14– ಮೂರು ದಿನಗಳ ಗೊಂದಲ ಹಾಗೂ ಕುತೂಹಲಕಾರಿ ವಿದ್ಯಮಾನಗಳ ಬಳಿಕ ಇಂದು ತೃತೀಯ ರಂಗದ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ಆಯ್ಕೆಯಾಗಿದ್ದಾರೆ. ತೃತೀಯ ರಂಗದ ನಾಯಕರು ಇಂದು ರಾಷ್ಟ್ರಪತಿಯವರನ್ನು ಭೇಟಿಯಾಗಿ ದೇವೇಗೌಡ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವಂತೆ ಮನವಿ ಅರ್ಪಿಸಿದ್ದಾರೆ.
ಕಾಂಗ್ರೆಸ್ ಪಾಲ್ಗೊಳ್ಳುವ ಸರ್ಕಾರದಲ್ಲಿ ಪ್ರಧಾನಿಯಾಗುವುದು ಸಾಧ್ಯವೇ ಇಲ್ಲವೆಂದು ಇಂದು ನಡೆದ ಸಿಪಿಎಂ ಕೇಂದ್ರ ಸಮಿತಿಯ ಸಭೆ ಮತ್ತೆ ತೀರ್ಮಾನ ಪ್ರಕಟಿಸಿದ್ದರಿಂದ, ತೃತೀಯ ರಂಗದ ಅಭ್ಯರ್ಥಿಯಾಗಿ ಪ್ರಧಾನಿ ಹುದ್ದೆಗೆ ನಿನ್ನೆ ಆಯ್ಕೆಯಾಗಿದ್ದ ಜ್ಯೋತಿ ಬಸು ಅವರ ಆಯ್ಕೆ ಸಾಧ್ಯವಾಗಲಿಲ್ಲ. ಜನತಾದಳದ ಮುಖಂಡ, ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರೂ ಪ್ರಧಾನಿಯಾಗಲು ಒಪ್ಪದಿದ್ದ ಕಾರಣ, ದೇವೇಗೌಡ ಅವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸರ್ಕಾರ ರಚನೆ: ಬಿಜೆಪಿ ವಿಶ್ವಾಸ
ನವದೆಹಲಿ, ಮೇ 14 (ಯುಎನ್ಐ)– ಸರ್ಕಾರ ರಚಿಸಲು ತಮ್ಮನ್ನು ರಾಷ್ಟ್ರಪತಿ ಅವರು ಆಹ್ವಾನಿಸುವರೆಂಬ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.
ಆದರೆ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯುವ ಯತ್ನವನ್ನು ಪಕ್ಷ ಮುಂದು ವರಿಸಿದೆ. ರಾಷ್ಟ್ರಪತಿ ಅವರ ಆಹ್ವಾನ ಬಂದ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳುವುದಾಗಿ ಪಕ್ಷದ ನಾಯಕ ಜಸ್ವಂತ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.