ಜನತಾ ದಳ ಕಾರ್ಯಕಾರಿಣಿ ಸಭೆಗೆ ಕೋರ್ಟ್ ತಡೆ
ನವದೆಹಲಿ, ಜೂನ್ 7– ನ್ಯಾಯಾಲಯದ ಕಟಕಟೆ ಹತ್ತಿದ, ನಾಳಿದ್ದು ನಡೆಯಬೇಕಿದ್ದ ವಿವಾದಿತ ಜನತಾದಳ ಅಧ್ಯಕ್ಷ ಚುನಾವಣೆಯನ್ನು ದೆಹಲಿ ಹೈಕೋರ್ಟ್ ಜೂನ್ 18ಕ್ಕೆ ಮುಂದೂಡಿತು. ಈ ಮಧ್ಯೆ ದಳದ ಅಧ್ಯಕ್ಷ ಹಾಗೂ ಅಭ್ಯರ್ಥಿ ಲಾಲೂ ಪ್ರಸಾದ್ ಯಾದವ್ ಅವರು ನಾಳೆ ಕರೆದಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ದೆಹಲಿ ಜಿಲ್ಲಾ ಮಟ್ಟದ ನ್ಯಾಯಾಲಯ ತಡೆ ನೀಡಿದ್ದರಿಂದ ಸದ್ಯಕ್ಕೆ ಗೊಂದಲ ನಿವಾರಣೆಯಾದಂತಾಗಿದೆ.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಲಾಲೂ ಪ್ರಸಾದ್ ಯಾದವ್ ಆಗಲಿ ಇಲ್ಲವೇ ಶರದ್ ಯಾದವ್ ಅವರಾಗಲಿ ಯಾವುದೇ ರೀತಿಯಲ್ಲೂ ತಲೆ ಹಾಕಕೂಡದು ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದ್ದಾರೆ.
ಗೊಂದಲ ಮತ್ತು ವಿವಾದಕ್ಕೆ ಸಿಲುಕಿದ್ದ ಜನತಾದಳದ ಅಧ್ಯಕ್ಷ ಚುನಾವಣೆ ಮೇಲಿನ ಪೂರ್ಣ ನಿಯಂತ್ರಣವನ್ನು ಈಗ ನ್ಯಾಯಾಲಯ ತನ್ನ ವಶಕ್ಕೆ ತೆಗೆದುಕೊಂಡಂತಾಯಿತು.
ಪಿಸಿಸಿ ಅಧ್ಯಕ್ಷತೆಗೆ ಬಂಗಾರಪ್ಪ, ಮೊಯ್ಲಿ, ಧರ್ಮಸಿಂಗ್ ಸ್ಪರ್ಧೆ
ಬೆಂಗಳೂರು, ಜೂನ್ 7– ಪ್ರದೇಶ ಕಾಂಗ್ರೆಸ್ (ಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಧರ್ಮಸಿಂಗ್ ಅವರಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಇದರಿಂದ ತ್ರಿಕೋನ ಸ್ಪರ್ಧೆ ನಡೆಯುವ ಸಂಭವವಿದೆ. ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜೂನ್ 10ರಂದು ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.