ADVERTISEMENT

25 ವರ್ಷಗಳ ಹಿಂದೆ: ಭಾನುವಾರ, ಮಾರ್ಚ್ 8, 1998

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:30 IST
Last Updated 7 ಮಾರ್ಚ್ 2023, 19:30 IST
   

ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ವಾಜಪೇಯಿ
ನವದೆಹಲಿ, ಮಾ. 7–
ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಪಕ್ಷದ ಹಿರಿಯ ನಾಯಕ ಅಟಲ್‌ ಬಿಹಾರಿ ವಾಯಪೇಯಿ ಅವರನ್ನು ಇಂದು ಔಪಚಾರಿಕವಾಗಿ ಆಯ್ಕೆ ಮಾಡಲಾಯಿತು.

ಸಂಸದೀಯ ನಾಯಕನ ಸ್ಥಾನಕ್ಕೆ ವಾಜಪೇಯಿ ಅವರ ಹೆಸರನ್ನು ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರು ಸೂಚಿಸಿದರು.ಅದನ್ನು ಪಕ್ಷದ ಹಿರಿಯ ನಾಯಕರಾದ ಸಿಕಂದರ್‌ ಭಕ್ತ್‌ ಮತ್ತು ಮುರಳಿ ಮನೋಹರ್‌ ಜೋಷಿ ಅವರು ಅನುಮೋದಿಸಿದರು. ನಾಯಕನ ಸ್ಥಾನಕ್ಕೆ ಬೇರೆ ಯಾರಾದರೂ ಸ್ಪರ್ಧಿಸುತ್ತಿದ್ದಾರೆಯೇ ಎಂದು ಅಡ್ವಾಣಿ ಅವರು ಪಕ್ಷದ ಉಪಾಧ್ಯಕ್ಷ ಎಸ್‌.ಎಸ್. ಭಂಡಾರಿ ಅವರನ್ನು ಕೇಳಿದಾಗ ಹೊಸದಾಗಿ ಲೋಕಸಭೆಗೆ ಆಯ್ಕೆಯಾದ ಎಲ್ಲ ಸದಸ್ಯರು ಎದ್ದು ನಿಂತು ವಾಜಪೇಯಿ ಅವರನ್ನೇ ಆಯ್ಕೆ ಮಾಡಲು ಸೂಚಿಸಿದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಗೆ ಎಡಪಕ್ಷ ವಿರೋಧ
ನವದೆಹಲಿ, ಮಾ. 7–
ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ), ಕ್ರಾಂತಿಕಾರಿ ಸೋಷಲಿಸ್ಟ್‌ ಪಕ್ಷ (ಆರ್‌ಎಸ್‌ಪಿ) ಮತ್ತು ಅಖಿಲ ಭಾರತ ಫಾರ್ವರ್ಡ್‌ ಬ್ಲಾಕ್‌ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಜ್ಯಾತ್ಯತೀತ ಸರ್ಕಾರ ರಚಿಸುವ ಯತ್ನಕ್ಕೆ ಸಧ್ಯಕ್ಕೆ ತೀವ್ರ ಹಿನ್ನೆಡೆ ಉಂಟಾಗಿದೆ.

ADVERTISEMENT

ಸಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಲ್ಲಿ ನಡೆಯುತ್ತಿದೆ. ಈ ಕುರಿತು ಸೋಮವಾರ ಅಂತಿಮ ತೀರ್ಮಾನ ಕೈಗೊಳ್ಳುವ ಇಂಗಿತವನ್ನು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅತುಲ್‌ ಕುಮಾರ್‌ ಅಂಜಾನ್‌ ಇಂದು ವ್ಯಕ್ತಪಡಿಸಿದರು. ಸಂಯುಕ್ತರಂಗ ಸರ್ಕಾರದ ಪತನಕ್ಕೆ ಕಾರಣವಾದ ಕಾಂಗ್ರೆಸ್‌, ಈಗ ನೈತಿಕವಾಗಿ ರಂಗದ ಬೆಂಬಲವನ್ನು ಕೋರುವಂತಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.