22 ಕ್ಯಾರಟ್ ಆಭರಣಗಳಿಗೆ ಅವಕಾಶ
ನವದೆಹಲಿ, ಆ.27–ಬುಲಿಯನ್ಗಳ ವ್ಯಾಪಾರವನ್ನು ಸರ್ಕಾರವೇ ನಡೆಸುವಂತೆ ಹಾಗೂ 22 ಕ್ಯಾರಟ್ ಶುದ್ಧತೆಯ ಚಿನ್ನದ ಆಭರಣಗಳನ್ನು ತಯಾರಿಸಲು ಅವಕಾಶ ಕೊಡುವಂತೆ ಸ್ವರ್ಣ ಹತೋಟಿ ಆಜ್ಞೆಯನ್ನು ತಿದ್ದುಪಡಿ ಮಾಡಲಾಗುವುದೆಂದು ತಿಳಿದು ಬಂದಿದೆ. ಚಿನ್ನದ ಬುಲಿಯನ್ಗಳು ಅಂದರೆ ಗಟ್ಟಿಗಳು ಮತ್ತು ಹಲಗೆಗಳ ರೂಪದಲ್ಲಿರುವ ಚಿನ್ನದ ವ್ಯಾಪಾರವನ್ನು ಸರ್ಕಾರಿ ಮಾಲೀಕತ್ವವಿರುವ ಬ್ಯಾಂಕುಗಳು ಅಥವಾ ಸರ್ಕಾರದಿಂದ ಅನುಮೋದನೆ ಪಡೆದ ಬ್ಯಾಂಕುಗಳು ಮಾತ್ರ ನಡೆಸುವಂತೆ ನಿರ್ಬಂಧಿಸಲಾಗುವುದು.
***
ವಿರೋಧ ಪಕ್ಷಗಳ ವರ್ತನೆ ಬಗ್ಗೆ ಪ್ರಧಾನಿ ಖಂಡನೆ
ನವದೆಹಲಿ, ಆ.27–ಇತಿಹಾಸದಲ್ಲಿಯೇ ಅತ್ಯಂತ ಕ್ಲಿಷ್ಟಕಾಲದಲ್ಲಿ ರಾಷ್ಟ್ರವಿರುವಾಗ, ಜನತೆಯನ್ನು ತಪ್ಪುದಾರಿಗೆಳೆಯುವ ಹಾಗೂ ‘ತೇಜೋವಧೆ’ ಮಾಡುವ ಕೃತ್ಯದಲ್ಲಿ ವಿರೋಧ ಪಕ್ಷಗಳು ತೊಡಗಿರುವುದನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಉಗ್ರವಾಗಿ ಖಂಡಿಸಿದರು. ರಾಜ್ಯಸಭೆಯಲ್ಲಿ ಚರ್ಚೆಯಲ್ಲಿ ಮಧ್ಯೆ ಭಾಗವಹಿಸಿದ ಪ್ರಧಾನಿ ಅವರು, ‘ಲಂಚ ರುಷುವತ್ತು ಪಡೆದ ಅಥವಾ ತಪ್ಪು ಕಾರ್ಯ ಮಾಡಿದ ಯಾರೊಬ್ಬರನ್ನು ಶಿಕ್ಷಿಸುವುದರಲ್ಲಿ ನಾನು ಯಾರಿಗೇನೂ ಕಡಿಮೆಯಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.