ಐದನೇ ಉಕ್ಕು ಕಾರ್ಖಾನೆಗೆ ಕಾಲ ಸನ್ನಿಹಿತ: ನಿವೇಶನದ ಆಯ್ಕೆಯಲ್ಲಿ ರಾಜಕೀಯ ಸಲ್ಲದೆಂದು ಎಚ್ಚರಿಕೆ
ಭದ್ರಾವತಿ, ಜ. 1– ಉಕ್ಕಿನ ಅಭಾವ ಎದುರಿಸಬೇಕಾದ ಪರಿಸ್ಥಿತಿಯಲ್ಲಿ ಐದನೇ ಉಕ್ಕಿನ ಕಾರ್ಖಾನೆಯನ್ನು ಬೇಗನೆ ಸ್ಥಾಪಿಸಬೇಕಾದ ಕಾಲ ಸನ್ನಿಹಿತವಾಗಿದೆಯೆಂದೂ ಆದರೆ ನಿವೇಶನದ ಆಯ್ಕೆಯಲ್ಲಿ ನಿರ್ಧಾರ ರಾಜಕೀಯ ದೃಷ್ಟಿಯಿಂದ ಕೂಡಿರದೆ ಆರ್ಥಿಕ ದೃಷ್ಟಿಯನ್ನು ಅವಲಂಬಿಸಿರಬೇಕೆಂದೂ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಹೊಸ ವಿಭಾಗವನ್ನು ಉದ್ಘಾಟಿಸಿ, ಈವರೆಗೆ ಭಾರಿ ಉಕ್ಕಿನ ಕಾರ್ಖಾನೆಗಳು ಉತ್ತರ ಭಾರತದಲ್ಲೇ ಬೆಳೆದಿದ್ದು ಎಂಜಿನಿಯರಿಂಗ್ ಉದ್ಯಮಗಳ ಬೆಳವಣಿಗೆಯಲ್ಲಿ ದಕ್ಷಿಣ ಭಾರತ ಹಿಂದುಳಿಯಲು ಮಾರ್ಗವಾಗಿದೆ ಎಂದರು.
ಬಿರ್ಲಾ ಸಂಸ್ಥೆಗೆ ಗೋವಾ ಕಾರ್ಖಾನೆ: ಯಂಗ್ ಟರ್ಕ್ಸ್ ತೀವ್ರ ವಿರೋಧ
ಪಣಜಿ, ಜ. 1– ಬಿರ್ಲಾ ಸಂಸ್ಥೆಗೆ ಗೋವಾದಲ್ಲಿ ಭಾರಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪಿಸಲು ರಹದಾರಿ ಇತ್ತ ಕೇಂದ್ರ ಸರ್ಕಾರದ ಕ್ರಮವು ‘ದುರದೃಷ್ಟಕರ’ವಷ್ಟೇ ಅಲ್ಲದೆ ಮೂಲಭೂತವಾದ ತಪ್ಪು ಕೂಡ ಎಂದು ‘ಯಂಗ್ ಟರ್ಕ್ಸ್’ ಹಾಗೂ ಸಂಸತ್ ಸದಸ್ಯರುಗಳಾದ ಚಂದ್ರಶೇಖರ್, ಕೃಷ್ಣಕಾಂತ್, ಪ್ರೊ. ಶಾಂತಿ ಕೊತಾರಿ ಮತ್ತು ಓಂ ಮೆಹ್ತಾ ಅವರು ಇಂದು ಇಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು.
‘ಈ ಯೋಜನೆಯನ್ನು ಖಾಸಗಿಯವರಿಗೆ ಒಪ್ಪಿಸಬಾರದಾಗಿತ್ತು’ ಎಂದು ನಾಲ್ವರೂ ಸಂಸತ್ ಸದಸ್ಯರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.