ADVERTISEMENT

50 ವರ್ಷಗಳ ಹಿಂದೆ| ಶನಿವಾರ 28–2–1970

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:57 IST
Last Updated 27 ಫೆಬ್ರುವರಿ 2020, 19:57 IST

ಮಹಾಜನ್ ವರದಿ ಜಾರಿಗೆ ಆಗ್ರಹ

ಬೆಂಗಳೂರು, ಫೆ. 27– ಈ ಘಟ್ಟದಲ್ಲಿ ರಾಜ್ಯದ ಗಡಿ ಯಥಾಸ್ಥಿತಿಯಲ್ಲಿರಲಿ, ಮಹಾಜನ್ ಆಯೋಗದ ಶಿಫಾರಸನ್ನು ಕಾರ್ಯಗತ ಮಾಡುವುದು ಬೇಡವೆಂದರೆ ಮಹಾಜನ್ ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ಸೇರಲು ಕಾದು ಕುಳಿತಿರುವವರಿಗೆ ಘೋರ ಅನ್ಯಾಯವಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಮೇಲ್ಮನೆಯಲ್ಲಿ ಹೇಳಿದರು.

ರಾಜ್ಯದ ಗಡಿ ಸಮಸ್ಯೆ ಕುರಿತು ನಾಲ್ಕು ದಿನಗಳ ಕಾಲ ನಡೆದ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಯವರು ‘ಆಯೋಗವು ಶಿಫಾರಸು ಮಾಡಿದ ಮೇಲೆ ಅಕ್ಕಲಕೋಟೆ, ಕಾಸರಗೋಡು ಮುಂತಾದ ಕನ್ನಡಪ್ರದೇಶದ ಜನರಿಗೆ ಅವರನ್ನು ಸ್ವಾಗತಿಸುವುದಾಗಿ ಆಶ್ವಾಸನೆ ನೀಡಿದ್ದೇವೆ. ಈಗ ಬೇಡ ಅನ್ನುವುದು ಮನುಷ್ಯತ್ವವೇ?’ ಎಂದು ಪ್ರಶ್ನಿಸಿದರು.

ADVERTISEMENT

ಗದಗ್ ರೈಲ್ವೆ ನಿಲ್ದಾಣದ ಮೇಲೆ ದಾಳಿ: ಗುಂಪು ಚದುರಿಸಲು ಗುಂಡು

ಗದಗ್, ಫೆ. 27– ಗದಗ್ ರೈಲು ನಿಲ್ದಾಣದ ಬಳಿ ಇಂದು ಮಧ್ಯಾಹ್ನ ಹುಬ್ಬಳ್ಳಿ– ಸೊಲ್ಲಾಪುರ ಪ್ಯಾಸೆಂಜರ್ ರೈಲಿಗೆ
ಮುತ್ತಿಗೆ ಹಾಕಿದ ಮೂರು ಸಹಸ್ರಕ್ಕೂಹೆಚ್ಚು ಜನರಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ಪೊಲೀಸರು ಗುಂಡು ಹಾರಿಸಿ ಚದುರಿಸಿದರೆಂದು ಇಲ್ಲಿನ ದಕ್ಷಿಣ ಮಧ್ಯ ರೈಲ್ವೆ ಮುಖ್ಯ ಕಚೇರಿಗೆ ಬಂದಿರುವ ವರದಿಯಿಂದ ತಿಳಿದುಬಂದಿದೆ.

ಗುಂಡಿನೇಟಿನಿಂದ 15 ವರ್ಷದ ಬಾಲಕ ಒಬ್ಬ ಗಾಯಗೊಂಡನು. ಕಲ್ಲಿನೇಟಿನಿಂದ 23 ಪೊಲೀಸರು ಮತ್ತು 7 ಜನ ಅಧಿಕಾರಿಗಳು ಗಾಯಗೊಂಡಿದ್ದಾರೆ. ರೈಲ್ವೆ ಆಸ್ತಿಗೆ 40,000 ರೂ. ನಷ್ಟವಾಗಿದೆ.

ಮರಾಠಿಗರ ಒತ್ತಡ ತಂತ್ರಕ್ಕೆ ಮಣಿಯದಿರಲು ಪ್ರಧಾನಿಗೆ ಎಚ್.ಎಂ.ಸಿ ಕಿವಿಮಾತು

ಬೆಂಗಳೂರು, ಫೆ. 27– ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಸಂಬಂಧದಲ್ಲಿ, ಮಹಾರಾಷ್ಟ್ರದ ಒತ್ತಡದ ತಂತ್ರಗಳಿಗೆ ಮಣಿಯಬಾರದು ಎಂದು ತಮ್ಮ ಕಾಂಗ್ರೆಸ್ಸಿನ ನಾಯಕಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಶ್ರೀ ಎಚ್.ಎಂ. ಚನ್ನಬಸಪ್ಪ ಅವರು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.