ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 25–6–1971

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 19:45 IST
Last Updated 24 ಜೂನ್ 2021, 19:45 IST
   

ಧಾರವಾಡದಲ್ಲಿ ಮರ ಉರುಳಿ ಮೂವರು ವಿದ್ಯಾರ್ಥಿಗಳ ಸಾವು

ಧಾರವಾಡ, ಜೂನ್‌ 24– ಇಂದು ಇಲ್ಲಿನ ಕರ್ನಾಟಕ ಆರ್ಟ್ಸ್‌ ಕಾಲೇಜು ಮುಂದುಗಡೆ ಇದ್ದ ದೊಡ್ಡ ಮರ ಇದ್ದಕ್ಕಿದ್ದಂತೆ ಸದ್ದಿಲ್ಲದೆ ಉರುಳಿದ ಪ್ರಯುಕ್ತ ಮರದ ಕೆಳಗಿದ್ದ ಮೂವರು ವಿದ್ಯಾರ್ಥಿಗಳು ಮೃತರಾದರು.

ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಈ ವಿದ್ಯಾರ್ಥಿಗಳು ಆರ್ಟ್ಸ್ ಕಾಲೇಜಿಗೆ ಸೇರಲು ಬಂದಿದ್ದು ಮರದ ಕೆಳಗೆ ಕುಳಿತಿದ್ದರು.

ADVERTISEMENT

ಮರದ ಕೆಳಗೆ ಸಿಕ್ಕಿಬಿದ್ದವರಲ್ಲಿ ಗುರಯ್ಯ ಗದಿಗಯ್ಯ ಸುಬ್ಬಾಪುರ ಮಠ ಎಂಬ ವಿದ್ಯಾರ್ಥಿ ಆಸ್ಪತ್ರೆಗೆ ಸಾಗಿಸುವಾಗ, ವೀರಪ್ಪಬಸಪ್ಪ ಅವರು ಆಸ್ಪತ್ರೆಗೆ ಸೇರಿಸಿದ ಕೂಡಲೇ ಮೃತರಾದರು. ತೀವ್ರವಾಗಿ ಗಾಯಗೊಂಡ ಮತ್ತೊಬ್ಬ ವಿದ್ಯಾರ್ಥಿ ಎಸ್‌.ಎನ್‌. ಪಾಟೀಲ್‌ (ನಿವೃತ್ತ ಡಿಎಸ್‌ಪಿ ಎನ್‌.ಎಂ. ಪಾಟೀಲ್‌ ಅವರ ಪುತ್ರ) ಅವರು ಹುಬ್ಬಳ್ಳಿ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಮೃತರಾದರು.

ಕರಾಚಿಗೆ ಅಮೆರಿಕ ಶಸ್ತ್ರಾಸ್ತ್ರ ನೌಕೆ ಬರದಂತೆ ತಡೆಯಲು ಸಂಸತ್ತಿನಲ್ಲಿ ಆಗ್ರಹ

ನವದೆಹಲಿ, ಜೂನ್ 24– ಪಾಕಿಸ್ತಾನಕ್ಕೆ ಅಮೆರಿಕ ಇತ್ತೀಚೆಗೆ ಶಸ್ತ್ರಾಸ್ತ್ರ ರವಾನಿಸಿದುದನ್ನು ಸಂಸತ್ತಿನ ಎರಡು ಸದನಗಳಲ್ಲೂ ಸದಸ್ಯರು ಇಂದು ಕಟುವಾಗಿ ಖಂಡಿಸಿದರಲ್ಲದೆ ಮಾರಕ ಶಸ್ತ್ರಾಸ್ತ್ರಗಳನ್ನು ಹೊತ್ತು ನ್ಯೂಯಾರ್ಕಿನಿಂದ ಪಾಕಿಸ್ತಾನದತ್ತ ಹೊರಟಿರುವ ಎರಡು ಪಾಕಿಸ್ತಾನಿ ಹಡಗುಗಳನ್ನು ಮಾರ್ಗದಲ್ಲಿ ತಡೆಯುವಂತೆ ಆಗ್ರಹಪಡಿಸಿದರು.

ಬಾಂಗ್ಲಾ ದೇಶದಲ್ಲಿ ಪಾಕಿಸ್ತಾನ ಸೇನೆಯು ನಡೆಸಿರುವ ನರಮೇಧಕ್ಕೆ ಅಮೆರಿಕ ಒತ್ತಾಸೆ ಕೊಡುತ್ತಿದೆಯೆಂದೂ ಸದಸ್ಯರು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.