39 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು, ಅ. 28– ಹಿರಿಯ ಸಾಹಿತಿಗಳಾದ ಸೇಡಿಯಾಪು ಕೃಷ್ಣಭಟ್ಟ, ಡಾ. ಎಲ್. ಬಸವರಾಜು, ಸಂಸ್ಕೃತ ವಿದ್ವಾಂಸ ಪ್ರೊ. ಎಸ್. ರಾಮಚಂದ್ರರಾವ್, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಮೂವತ್ತೊಂಬತ್ತು ಮಂದಿಗೆ ಮೂವತ್ತೊಂಬತ್ತನೇ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಎಸ್. ನಾರಾಯಣ ಶೆಟ್ಟಿ (ಸುಜನಾ), ಸೇಡಿಯಾಪು ಕೃಷ್ಣಭಟ್ಟ, ಡಾ. ಎಲ್ ಬಸವರಾಜು, ಡಾ. ಕೆ. ಕುಶಾಲಪ್ಪ ಗೌಡ, ಸಂಗೀತ ಕ್ಷೇತ್ರದಲ್ಲಿ ಪಂಡಿತ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಎಂ.ಜೆ. ಶ್ರೀನಿವಾಸ ಅಯ್ಯಂಗಾರ್, ಬಿ.ಎಸ್. ವಿಜಯರಾಘವನ್, ನಾಗೇಶ್ ಎ. ಬಪ್ಪನಾಡು ಅವರಿಗೆ ಪ್ರಶಸ್ತಿ ಸಿಕ್ಕಿದೆ.
ಎಚ್. ತಿಪ್ಪೇರುದ್ರಸ್ವಾಮಿ ಅವರ ನಿಧನ
ಮೈಸೂರು, ಅ. 28– ಕನ್ನಡದ ಹಿರಿಯ ವಿದ್ವಾಂಸ ಹಾಗೂ ಸಂಶೋಧಕರಾದ ಡಾ. ಎಚ್. ತಿಪ್ಪೇರುದ್ರಸ್ವಾಮಿ (66) ಅವರು ಇಂದು ಬೆಳಗಿನ ಜಾವ ಇಲ್ಲಿ ನಿಧನರಾದರು. ಪತ್ನಿ, ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.
ಜೈಲಿನಿಂದ ಕಲ್ಯಾಣ್ ಬಿಡುಗಡೆ
ನವದೆಹಲಿ, ಅ. 28 (ಯುಎನ್ಐ)– ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ದಿನದ ಸಾಂಕೇತಿಕ ಜೈಲು ಶಿಕ್ಷೆಗಾಗಿ ನಿನ್ನೆ ಬಂಧಿತರಾಗಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಕಲ್ಯಾಣ್ ಸಿಂಗ್ ಅವರನ್ನು ಇಂದು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಅಯೋಧ್ಯೆಯಲ್ಲಿ ಕರಸೇವೆಗೆ ಅವಕಾಶ ನೀಡುವ ಮೂಲಕ ನ್ಯಾಯಾಲಯಕ್ಕೆ ನೀಡಿದ್ದ ವಚನವನ್ನು ಉಲ್ಲಂಘಿಸಿದ ಆರೋಪಕ್ಕಾಗಿ ಸುಪ್ರೀಂ ಕೋರ್ಟ್ ಅವರಿಗೆ ಒಂದು ದಿನದ ಸೆರೆಮನೆವಾಸ ಮತ್ತು ಎರಡು ಸಾವಿರ ರೂಪಾಯಿಗಳ ದಂಡ ವಿಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.