ಹರಿಜನ, ಕೃಷಿ ಕಾರ್ಮಿಕರಿಗೆ ಉಚಿತ ನಿವೇಶನಕ್ಕಾಗಿ ಹತ್ತು ವರ್ಷದ ಭಾರಿ ಯೋಜನೆ
ನವದೆಹಲಿ, ಆಗಸ್ಟ್ 21– ಮೂವತ್ತು ಲಕ್ಷ ಮಂದಿ ಭೂರಹಿತ ಹರಿಜನ–ಗಿರಿಜನರಿಗೆ ಹಾಗೂ ಇತರ 20 ಲಕ್ಷ ಮಂದಿ ಭೂರಹಿತ ಕೃಷಿ ಕಾರ್ಮಿಕರಿಗೆ ಬರುವ ಹತ್ತು ವರ್ಷಗಳಲ್ಲಿ ನಿವೇಶನ ಒದಗಿಸಲು 375 ಕೋಟಿ ರೂ. ವೆಚ್ಚದ ಯೋಜನೆ ಕೈಗೊಳ್ಳಬೇಕೆಂದು ರಾಷ್ಟ್ರೀಯ ಕೃಷಿ ಆಯೋಗ ಶಿಫಾರಸು ಮಾಡಿದೆ.
ಇಂದು ಸರ್ಕಾರಕ್ಕೆ ಸಲ್ಲಿಸಲಾದ ಆಯೋಗದ ಮಧ್ಯಂತರ ವರದಿಯಲ್ಲಿ ಪ್ರತಿ ವರ್ಷವೂ ಮೂರು ಲಕ್ಷ ಹರಿಜನ–ಗಿರಿಜನ ಸಂಸಾರಗಳಿಗೆ, ಭೂರಹಿತ ಕೃಷಿ ಕಾರ್ಮಿಕರ 2 ಲಕ್ಷ ಸಂಸಾರಗಳಿಗೆ ಮನೆ ಕಟ್ಟಲು ನಿವೇಶನ ಒದಗಿಸಬೇಕೆಂದು ತಿಳಿಸಿದೆ.
ಹರಿಜನ–ಗಿರಿಜನ ಸಂಸಾರಗಳಿಗೆ 22 ಕೋಟಿ 50 ಲಕ್ಷ ರೂ. ಗಳು, ಇತರ ಕೃಷಿಕಾರ್ಮಿಕ ಸಂಸಾರಗಳಿಗೆ 15 ಕೋಟಿ ರೂ.ಗಳು ವಾರ್ಷಿಕವಾಗಿ ವೆಚ್ಚ ತಗಲಬಹುದೆಂದು ಆಯೋಗ ಅಂದಾಜುಮಾಡಿದೆ. ಬಡಜನತೆಗೆ ಉಚಿತ ನಿವೇಶನ ಯೋಜನೆ ಜತೆಗೆ ಅರಣ್ಯ ಸಂಪನ್ಮೂಲದ ಸೂಕ್ತ ಬಳಕೆ, ಮಣ್ಣಿನ ಗುಣ ತಿಳಿಸುವ ಭಾರತ ಭೂಪಟ ತಯಾರಿಕೆ ಹಾಗೂ ಆಲೂಗಡ್ಡೆ ಬೀಜೋತ್ಪಾದನೆ ಕುರಿತ ಯೋಜನೆಗಳು ಆಯೋಗದ ವರದಿಯಲ್ಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.