ಕಾಂಗ್ರೆಸಿನ ಘೋಷಿತ ನೀತಿಗಳಿಗೇ ಸರ್ಕಾರ ಪೂರ್ಣ ಬದ್ಧ
ನವದೆಹಲಿ, ನ. 23– ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸರಕಾರವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅದು ಕಾಂಗ್ರೆಸ್ ಹಿಂದೆ ಅಂಗೀಕರಿಸಿರುವ ನಿರ್ಣಯಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆಯೆಂದೂ ಅಲ್ಲದೆ ಘೋಷಿತ ನೀತಿಗಳಿಂದ ಸ್ವಲ್ಪವೂ ಸರಿಯುವುದಿಲ್ಲವೆಂದೂ ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಸ್ಪಷ್ಟವಾಗಿ ಹೇಳಿದರು.
ಕೋರಿಕೆ ಎ.ಐ.ಸಿ.ಸಿ. ಅಧಿವೇಶನದಲ್ಲಿ ಆರ್ಥಿಕ ಕಾರ್ಯಕ್ರಮ ಕುರಿತು ಸುಮಾರು ಅರ್ಧ ಗಂಟೆ ಕಾಲ ಮಾತನಾಡಿದ ಪ್ರಧಾನಿ ಅವರು ‘ಆರ್ಥಿಕ ಕಾರ್ಯಕ್ರಮಗಳ ವಿಷಯದಲ್ಲಿ ರಾಷ್ಟ್ರವು ಈಗಾಗಲೇ ರೂಪಿಸಿರುವ ಹತ್ತು ಅಂಶಗಳ ಕಾರ್ಯಕ್ರಮ
ಕ್ಕಿಂತಲೂ ಮುಂದೆ ಹೋಗುವುದು’ ಎಂದು ಹೇಳಿದರು.
ಜನತೆಯನ್ನೂ ತನ್ನೊಡನೆ ಕರೆದೊಯ್ಯಲು ಸಂಸ್ಥೆ ಸಜ್ಜಾಗಬೇಕೆಂದೂ ಪ್ರಧಾನಿ
ಅವರು ನುಡಿದರು.
ನಿರ್ಧಾರಕ್ಕೆ ಎಸ್ಸೆನ್ ‘ಬದ್ಧರಲ್ಲ’
ನವದೆಹಲಿ, ನ. 23– ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ತೆಗೆದು ಹಾಕಿದ ಕೋರಿಕೆ ಎ.ಐ.ಸಿ.ಸಿ. ಅಧಿವೇಶನದ ನಿರ್ಧಾರಕ್ಕೆ ತಾವು ಬದ್ಧರಲ್ಲ ಎಂದು ಎಸ್. ನಿಜಲಿಂಗಪ್ಪನವರು ಇಂದು ರಾತ್ರಿ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಇದು ಕಾನೂನಿನ ಪ್ರಕಾರ ಕರೆದ ಸಭೆಯಲ್ಲ. ಎಂದೂ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ತಮ್ಮನ್ನು ಆಯ್ಕೆ ಮಾಡಿದ ಪ್ರತಿನಿಧಿಗಳಿಗೆ ಮಾತ್ರವೇ ಪದಚ್ಯುತಗೊಳಿಸುವ ಅಧಿಕಾರವಿರುವುದಾಗಿಯೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.