ಭಾರತದಿಂದ ಪಾಕ್ ಸಿಬ್ಬಂದಿ ನಿರ್ಗಮನಕ್ಕೆ ನಿರ್ಬಂಧ
ನವದೆಹಲಿ, ಏ. 26– ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರವರ್ಗ ಮತ್ತಿತರ ಅಧಿಕಾರಿಗಳ ಚಲನವಲನದ ಮೇಲೆ ಭಾರತವು ಇಂದು ಪ್ರತೀಕಾರಾರ್ಥ ಕ್ರಮಗಳನ್ನು ಕೈಗೊಂಡಿದ್ದರಿಂದ ಭಾರತ– ಪಾಕಿಸ್ತಾನ ಬಾಂಧವ್ಯವು ರಾಜತಾಂತ್ರಿಕ ಹಣಾಹಣಿಯ ಘಟ್ಟದ ಕಡೆಗೆ ಸಾಗುತ್ತಿದೆ.
ಇಂದು ಸಂಜೆ ಆರು ಗಂಟೆಯಿಂದ ಜಾರಿಗೆ ಬಂದ ಹೊಸ ಕ್ರಮಗಳ ಪ್ರಕಾರ, ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಗಳ ಎಲ್ಲ ರಾಜತಾಂತ್ರಿಕ ಅಧಿಕಾರಿ ಗಳು, ಅವರ ಪತ್ನಿಯರು, ಮಕ್ಕಳು ಮತ್ತು ಪಾಕಿಸ್ತಾನಿ ಪ್ರಜೆಗಳಾಗಿರುವ ಮನೆ ಆಳುಗಳು ಭಾರತದಿಂದ ಹೊರ ಹೋಗಲು ಸರ್ಕಾರದ ಪೂರ್ವಭಾವಿ ಅನುಮತಿ ಪಡೆಯಬೇಕು.
ಗಡಿ, ಕಾವೇರಿಯಂತಹ ಸಮಸ್ಯೆಗಳಲ್ಲಿ ರಾಜ್ಯಪಾಲರು ಕೈ ಹಾಕುವುದಕ್ಕೆ ವಿರೋಧ
ಬೆಂಗಳೂರು, ಏ. 26– 1924ರ ಒಪ್ಪಂದದ ಮಿತಿಯೊಳಗೆ, ಕಾವೇರಿ ಯೋಜನೆಗಳಿಗೆ ಕೇಂದ್ರದ ಅನುಮತಿ ಪಡೆಯುವ ರಾಜ್ಯಪಾಲರ ಪ್ರಯತ್ನವನ್ನು ವಿರೋಧಿಸಿ ಕೆಲವು ಶಾಸಕರು ಹಾಗೂ ಮಾಜಿ ಶಾಸಕರು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಈ ಸದಸ್ಯರು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ತಂತಿ ಕಳುಹಿಸಿ ಕಾವೇರಿ ನೀರು ಹಾಗೂ ಗಡಿ ವಿವಾದಗಳಂಥ ‘ಕ್ಲಿಷ್ಟವಾದ ಹಾಗೂ ಸೂಕ್ಷ್ಮವಾದ’ ಪ್ರಶ್ನೆಗಳಿಗೆ ಕೈಹಾಕಬಾರದೆಂದು ರಾಜ್ಯಪಾಲರಿಗೆ ಸಲಹೆ ಮಾಡಬೇಕೆಂದು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.