ADVERTISEMENT

50 ವರ್ಷಗಳ ಹಿಂದೆ: ಮುಷ್ಕರ ಜಾಡ್ಯ ತೊಲಗಿಸಲು ಜಾಗೃತರಾಗಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 21:42 IST
Last Updated 19 ಜನವರಿ 2024, 21:42 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

 ಭಾನುವಾರ 20–1–1974

ಮುಷ್ಕರ ಜಾಡ್ಯ ತೊಲಗಿಸಲು ಜಾಗೃತರಾಗಿ 

ಮಂಗಳೂರು, ಜ. 19 – ‘ಅತಿ ಕಡಿಮೆ ಕೆಲಸ, ಹೆಚ್ಚು ಪಗಾರ – ಇದಕ್ಕಾಗಿ ಮುಷ್ಕರ. ಈ ಜಾಡ್ಯ ತೊಲಗಿಸಲು ಜನರು ಜಾಗೃತರಾಗಬೇಕು’ ಎಂದು ಲೋಕೋಪಯೋಗಿ ಸಚಿವ ಎಚ್. ಎಂ. ಚನ್ನಬಸಪ್ಪ ಅವರು ಇಂದು ಕರೆ ನೀಡಿದರು.

ADVERTISEMENT

ಇಲ್ಲಿಗೆ ಆರುಮೈಲಿ ದೂರದ ಬೃಹತ್ ಬಂದರು ನಿವೇಶನದಲ್ಲಿ ಕೊಡಗು, ದಕ್ಷಿಣಕನ್ನಡ ಜಿಲ್ಲೆಗಳ ಇಂಜಿನಿಯರುಗಳ ಸಂಘ ಮತ್ತು ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ಮಂಗಳೂರು ಶಾಖೆ ಜೊತೆಯಾಗಿ ಏರ್ಪಡಿಸಿದ್ದ ವಿಚಾರಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಸಚಿವ ಚನ್ನಬಸಪ್ಪ ಅವರು, ಇಂದಿನ ದೇಶದ ಪರಿಸ್ಥಿತಿಯ ಬಗೆಗೆ ತಮ್ಮ ಕಳವಳ ವ್ಯಕ್ತ ಪಡಿಸಿದರು.

‘ದೇಶದ ಈ ದುಷ್ಟಶಕ್ತಿಗಳನ್ನು ಹತ್ತಿಕ್ಕಲು ಒಂದು ಕ್ರಾಂತಿ ಆಗಬೇಕಾದೀತು’ ಎಂದು ಅವರು ಹೇಳಿ, ಪ್ರಜಾಭಿಪ್ರಾಯ ಕಲ್ಲು ಹಿಡಿದು ಓಡಾಡುವರ ಕೈಯಲ್ಲಿ ಇರದಂತೆ ನೋಡಿಕೊಳ್ಳಬೇಕೆಂದು ಮನವಿಮಾಡಿಕೊಂಡರು.

ಟಾಲ್‌ಸ್ಟಾಯ್‌ ಸ್ಮಾರಕ ವಸ್ತುಗಳು ಬೆಂಕಿಗೆ ಆಹುತಿ 

ವೆಲ್ಷ್‌ಪೂಲ್‌, ವೇಲ್ಸ್‌ ಜ. 19 – ರಷ್ಯದ ಖ್ಯಾತ ಕಾದಂಬರಿಕಾರ ಲಿಯೋ ಟಾಲ್‌ ಸ್ಟಾಯ್ ಅವರ ಸ್ಮಾರಕ ವಸ್ತುಗಳು ನಿನ್ನೆ ಇಲ್ಲಿಗೆ ಸಮೀಪ ಅವರ ಮೊಮ್ಮಗ ಕೌಂಟ್ ನಿಕೊಲಾಯಿ ಟಾಲ್‌ಸ್ಟಾಯ್‌ ಮನೆಗೆ ಬಿದ್ದ ಬೆಂಕಿಯಲ್ಲಿ ಸುಟ್ಟು ನಾಶವಾದವು.

‘ಟಾಲ್‌ಸ್ಟಾಯ್‌ ಕುಟುಂಬಕ್ಕೆ ಸೇರಿದ ವರ್ಣ ಚಿತ್ರಗಳು, ಹಸ್ತಪ್ರತಿಗಳು ನಾಶವಾಗಿರುವುದರಿಂದ ಆಗಿರುವ ನಷ್ಟ ಅಪಾರ. ಇವುಗಳಲ್ಲಿ ಕೆಲವು ಹದಿನೇಳನೇ ಶತಮಾನಕ್ಕೆ ಸೇರಿದ್ದು’ ಎಂದು ಹೇಳಿದ ಕೌಂಟ್ ಅವರು ‘ಅವನ್ನು ಮತ್ತೆ ತುಂಬಲು ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.