ಶುಕ್ರವಾರ 27–09–1974
ಯೂಸುಫ್ ಪಟೇಲ್, ಲಲ್ಲು, ಧೋಲಾಕಿಯಾ ಪೊಲೀಸರಿಗೆ ಶರಣು
ಮುಂಬಯಿ, ಸೆ. 26– ಕಳ್ಳಸಾಗಣೆ ಪ್ರಪಂಚದ ಮೂವರು ‘ದೊರೆ’ಗಳಲ್ಲಿ ಒಬ್ಬನಾದ ಯೂಸುಫ್ ಪಟೇಲ್, ಹಾಜಿ ಮಿರ್ಜಾ ಮಸ್ತಾನಿನ ಸಹಚರನೆಂದು ಹೇಳಲಾದ ಲೀಲಾಧರಂ ಧೋಲಾಕಿಯಾ ಮುಂಬಯಿಯಲ್ಲಿ ಇಂದು ಪೊಲೀಸರಿಗೆ ಶರಣಾದರೆ ಮತ್ತೊಬ್ಬ ಕದೀಮ ಲಲ್ಲುಜೋಗಿ ಗುಜರಾತಿನ ಬಲ್ಸಾರಿನಲ್ಲಿ ಶರಣಾಗತನಾದ.
ಇನ್ನೂ ಮುವತ್ತನ್ನು ಮೀರದ ಪಟೇಲ್ ನಗರ ಗೂಢಚರ್ಯೆ ಇಲಾಖೆ ಕಚೇರಿಯೊಳಕ್ಕೆ ತನ್ನ ವಕೀಲರ ಜತೆಗೂಡಿ ಬಂದು ಪೊಲೀಸರ ಮುಂದೆ ನಿಂತು ‘ಇಗೋ ನಾನಿಲ್ಲಿದ್ದೇನೆ’ ಎಂದ. ಕುವೈತಿಗೆ ತಪ್ಪಿಸಿಕೊಂಡು ಹೋಗಿರಬಹುದೆಂದು ವದಂತಿಗಳು ಹಬ್ಬಿದ್ದು ಕುತೂಹಲ ಕೆರಳಿಸಿದ್ದ ಪಟೇಲ್ ಮತ್ತು ಮಸ್ತಾನ್ ಸಹಚರ ಧೋಲಾಕಿಯಾ ಶರಣಗಾತಿ ಹಾಗೂ ಕೃಷ್ಣ ಬುಧಚೀಗಾವ್ಡೆ ಅಲಿಯಾಸ್ ಕಾಕಾಕೋಲಿ ಮತ್ತು ಇಬ್ರಾಹಿಂ ಇಸ್ಮೇಲ್ ವಕೀಲ್ ಬಂಧನದಿಂದ ಮುಂಬಯಿಯಲ್ಲಿ ಬಂಧಿತರಾದ ಕಳ್ಳಸಾಗಭೆ ಕದೀಮರ ಸಂಖ್ಯೆ ಹದಿನಾಲ್ಕಕ್ಕೇರಿದೆ.
ನಗರದಲ್ಲಿ ಆರುಜನ ಕದೀಮರ ಬಂಧನ
ಬೆಂಗಳೂರು, ಸೆ. 26– ಭಾರತಾದ್ಯಂತ ನಡೆಯುತ್ತಿರುವ ಕ್ರಮವನ್ನನುಸರಿಸಿ ನಗರದ ಪೊಲೀಸರು ಇಂದು ಬೆಂಗಳೂರಿನ ಕುಪ್ರಸಿದ್ಧ ಕಳ್ಳ ಸಾಗಾಣಿಕೆದಾರ ಹಾಗೂ ವ್ಯಾಪರಿಗಳೆನ್ನಲಾದ 6 ಮಂದಿಯನ್ನು ಬಂಧಿಸಿದ್ದಾರೆ.
ಚಿನ್ನ, ಕೈಗಡಿಯಾರ, ಜರತಾರಿಗಳಲ್ಲಿ ಕಳ್ಳ ಸಾಗಾಣಿಕೆ ಹಾಗೂ ವ್ಯಾಪಾರದಲ್ಲಿ ನಿರತರಾಗಿದ್ದರೆಂಬ ಆಪಾದನೆಗಳ ಮೇಲೆ ಇವರುಗಳನ್ನು ದಸ್ತಗಿರಿ ಮಾಡಲಾಗಿದೆ. ಇವರುಗಳನ್ನು ಆಂತರಿಕ ಭದ್ರತಾ ಶಾಸನದ ರೀತ್ಯ ಬಂಧಿಸಿ ಸಂಜೆ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.