‘ಏಷ್ಯದ ಹೆಮ್ಮೆ’ ಶರಾವತಿ ಯೋಜನೆ ಕಳಪೆ ಕೆಲಸ ಬಗ್ಗೆ ನ್ಯಾಯಾಂಗ ತನಿಖೆ
ಬೆಂಗಳೂರು, ಜೂನ್ 26– ‘ಏಷ್ಯದ ಹೆಮ್ಮೆ’ ಶರಾವತಿ ಯೋಜನೆಯಲ್ಲಿ ಕಳಪೆ ಕೆಲಸದಿಂದ ನಾಲ್ಕು ವಿಭಾಗಗಳಲ್ಲಿ ತೀವ್ರ ಹಾನಿಯಾಗಿರುವುದರ ಬಗ್ಗೆ ಎಚ್.ಎಂ. ಚನ್ನಬಸಪ್ಪನವರು ಅದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದನ್ನು ತಳ್ಳಿಹಾಕಲಿಲ್ಲ.
ವಡೇನಬೈಲ್ ಸುರಂಗದಲ್ಲಿ ಕಾಂಕ್ರೀಟ್ ಕಿತ್ತು ಬಿರುಕು ಮತ್ತು ಕೊಳ್ಳಗಳಾಗಿ ಜಲ್ಲಿ ಕಬ್ಬಿಣದ ಸರಳು ಎದ್ದು ಬಂದಿರುವ ವಿಚಾರದಲ್ಲಿ ಕಳೆದವಾರ ಸಭೆಗೆ ವಿವರ ನೀಡಿದ ಸಚಿವರು ತಾವು ಆಶ್ವಾಸನೆ ನೀಡಿದಂತೆ ಶರಾವತಿ ವಿಚಾರದಲ್ಲಿ ಪೂರ್ಣ ಹೇಳಿಕೆ ನೀಡಿದರು. ಈವರೆಗೆ ಅಷ್ಟಾಗಿ ಬೆಳಕಿಗೆ ಬರದಿರುವ ಲಿಂಗನಮಕ್ಕಿ ತೂಬು, ವಿದ್ಯುತ್ ಕಾಲುವೆ, ತಲಕಳಲೆ ಆಣೆಕಟ್ಟುಗಳ ದುಸ್ಥಿತಿಯನ್ನು ಅವರು ತಮ್ಮ ಹನ್ನೆರಡು ಪುಟಗಳ ಹೇಳಿಕೆಯಲ್ಲಿ ತಿಳಿಸಿದರು.
ಮೊದಲಲ್ಲಿ ರಾಜ್ಯದಲ್ಲಿ ಕಡಿಮೆ ವೆಚ್ಚದ 10 ಸಿನಿಮಾ ನಿರ್ಮಾಣ
ಬೆಂಗಳೂರು, ಜೂನ್ 26– ಚಲಚಿತ್ರಮಂದಿರಗಳಿಲ್ಲ ಕಡೆ ಕಡಿಮೆ ಖರ್ಚಿನಲ್ಲಿ ಚಲನಚಿತ್ರ ಮಂದಿರಗಳನ್ನು ನಿರ್ಮಿಸಲು ರಾಜ್ಯದ ಚಲನಚಿತ್ರ ಅಭಿವೃದ್ಧಿ ಕಾರ್ಪೊರೇಷನ್ ತೀರ್ಮಾನಿಸಿದೆ.
ಮೊದಲಲ್ಲಿ 10 ಚಲನಚಿತ್ರ ಮಂದಿರಗಳನ್ನು ನಿರ್ಮಿಸಲಾಗುವುದು. ರಾಜ್ಯದ ಹಾಗೂ ಹೊರಗಿನ ನಿರ್ಮಾತೃಗಳಿಗೆ ನೆರವಾಗಲು ತತ್ಕ್ಷಣ ಹೊರಾಂಗಣ ‘ಷೂಟಿಂಗ್’ ಘಟಕವೊಂದನ್ನು ಕಾರ್ಪೊರೇಷನ್ ಕೊಳ್ಳಲಿದೆ.
ವರ್ಣಚಿತ್ರಗಳ ಲ್ಯಾಬೊರೇಟರಿಯೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ಮೈಸೂರು ಫಿಲಂ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರು ತಮ್ಮ ಗೌರವಾರ್ಥ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾತನಾಡಿದ ಪ್ರಸಿದ್ಧ ನಿರ್ದೇಶಕ ನಿರ್ಮಾತೃ ಶ್ರೀ ವಿ. ಶಾಂತಾರಾಂ ಅವರು ಕಾರ್ಪೊರೇಷನ್ನಿನ ಈ ನಿರ್ಧಾರಗಳನ್ನು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.