ಬೆಂಗಳೂರು, ಏ. 4– ಕೃಷ್ಣ ಮೇಲ್ದಂಡೆ, ಹೇಮಾವತಿ ಮತ್ತು ಇತರ ನಾಲ್ಕು ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಣ ದುರುಪಯೋಗದ ಬಗ್ಗೆ ಬಂದಿರುವ ದೂರುಗಳನ್ನು ಗಮನಿಸಿ ತನಿಖೆ ಮಾಡಲು ಜಾಗ್ರತಾ ಆಯೋಗಕ್ಕೆ ವಹಿಸಲಾಗಿದ್ದು, ಅದರ ವರದಿಗಳನ್ನು ನಿರೀಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಕೃಷ್ಣಾ ಮೇಲ್ದಂಡೆಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಕೆಲಸದ ಮೊಬಲಗಿಗಿಂತ ಹೆಚ್ಚಾಗಿ ಐದು ಲಕ್ಷ ಆರು ಸಾವಿರ ರೂ.ಗಳನ್ನು, ಕಪಿಲಾ ಕಾಮಗಾರಿಗಳಲ್ಲಿ ಮೂರು ಲಕ್ಷ ಐದು ಸಾವಿರ ರೂ.ಗಳನ್ನು ಪಾವತಿ ಮಾಡಲಾಗಿದೆಯೆಂದು ತಿಳಿದುಬಂದಿದೆಯೆಂದು ಅವರು ಹೇಳಿದರು.
ದೂರುಗಳು ಬಂದಿರುವ ಇತರ ಯೋಜನೆಗಳು; ಹಾರಂಗಿ, ಮಲಪ್ರಭಾ ಮತ್ತು ಘಟಪ್ರಭಾ.
ಉಜೈನ್, ಏ. 4– ಕೃಷಿಗೆ ಪ್ರಥಮ ಆದ್ಯತೆ, ಇಡೀ ತೆರಿಗೆ ವಿಧಾನಗಳಿಗೆ ಹೊಸ ರೂಪ ಮತ್ತು ಸಮಗ್ರವಾದ ವೇತನ ನೀತಿಗಳನ್ನು ರೂಪಿಸಲು ಅನುಕೂಲವಾಗುವಂತೆ ಐದನೇ ಯೋಜನೆಯನ್ನು ಪುನರ್ರಚಿಸಬೇಕೆಂದು ಜನಸಂಘ ಕಾರ್ಯ ಸಮಿತಿ ಇಂದು ಸಲಹೆ ಮಾಡಿತು.
ಎರಡು ದಿನಗಳ ಸಮಾವೇಶದ ಕೊನೇ ದಿನವಾದ ಇಂದು ‘ಆರ್ಥಿಕ ಪರಿಸ್ಥಿತಿ’ ಕುರಿತು ನಿರ್ಣಯವು, ಸರಿಪಡಿಸುವುದಕ್ಕೆ ದುರ್ಲಭವಾದ ರೀತಿಯಲ್ಲಿ ಇಡೀ ಹಣಕಾಸಿನ ಸ್ಥಿತಿ ಹದಗೆಡಿಸಿದ ಆರೋಪವನ್ನು ಈಗಿನ ಸರ್ಕಾರದ ಮೇಲೆ ಹೊರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.