ಅಗತ್ಯ ವಸ್ತುಗಳ ದಾಸ್ತಾನು ತಡೆಗೆಉಗ್ರ ಕ್ರಮ ಸಂಭವ
ನವದೆಹಲಿ, ಅ. 1– ಅಗತ್ಯ ವಸ್ತುಗಳ ಬೆಲೆಗಳಲ್ಲಿ ಅಸಾಧಾರಣ ಏರಿಕೆಗಳನ್ನು ತಡೆಗಟ್ಟಲು, ಲಾಭ ಗಳಿಕೆಗಾಗಿ ದಾಸ್ತಾನಿಡುವವರ ವಿರುದ್ಧ ಕಟು ಕ್ರಮ ಹಾಗೂ ಸರ್ಕಾರಿ ವಿತರಣೆಯಲ್ಲಿ ಹೆಚ್ಚು ವಿಚಕ್ಷಣೆಯ ದ್ವಿಮುಖ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಸಂಭವವಿದೆ.
ಪ್ರಧಾನಿ ಇಂದಿರಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಂಪುಟದ ಆರ್ಥಿಕ ನೀತಿ ಕುರಿತ ಸಮಿತಿಯ ಒಂದು ಗಂಟೆ ಕಾಲದ ಸುದೀರ್ಘ ಸಮಾಲೋಚನೆ ಅಂತ್ಯದಲ್ಲಿ ದೊರೆತ ಇಂಗಿತವಿದು.
ಯಾವ ನಿರ್ದಿಷ್ಟ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲವಾದರೂ ದಿನಬಳಕೆ ವಸ್ತು ಗಳಾದ ಧಾನ್ಯ, ದ್ವಿದಳ ಧಾನ್ಯ, ಖಾದ್ಯ ತೈಲ, ಬಟ್ಟೆ, ಸಕ್ಕರೆ, ತರಕಾರಿ, ಬೆಂಕಿ ಪೊಟ್ಟಣ, ಸೀಮೆಎಣ್ಣೆ ಮೊದಲಾದವುಗಳ ಬಗೆಗೆ ನಿರ್ದಿಷ್ಟ ದೀರ್ಘಾವಧಿ ಬೆಲೆ ನೀತಿಯೊಂದನ್ನು ರಚಿಸಬೇಕೆಂಬುದು ಸಮಿತಿಯ ಒಟ್ಟಾರೆ
ಅಭಿಪ್ರಾಯವಾಗಿತ್ತು.
ಸಿಮ್ಲಾ ಒಪ್ಪಂದಕ್ಕೆ ಲೋಕಸಭೆ ಅಸ್ತು
ನವದೆಹಲಿ, ಅ. 1– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಭುಟ್ಟೊ ಅವರು ಜುಲೈ 3ರಂದು ಮಾಡಿಕೊಂಡ ಸಿಮ್ಲಾ ಒಪ್ಪಂದವನ್ನು ಲೋಕಸಭೆ ಇಂದು ಭಾರಿ ಬಹುಮತದಿಂದ ಅನುಮೋದಿಸಿತು.
ಒಪ್ಪಂದ ತಿರಸ್ಕರಿಸುವಂತೆ ಬಿರುಸಾಗಿ ಹೋರಾಡಿದ ಜನಸಂಘದ ಸದಸ್ಯರು ಆ ಸಂಬಂಧದ ಎ.ಜಿ. ವಾಜಪೇಯಿ ಅವರ ಇನ್ನೊಂದು ಸೂಚನೆಯನ್ನು ಮತಕ್ಕೆ ಕೂಗಿದಾಗ ಮತಗಳ ಎಣಿಕೆಗೆ ಒತ್ತಾಯ ಮಾಡಲಿಲ್ಲ. ಇದು ಅವರ ಒಬ್ಬೊಂಟಿತನದ ಮತ್ತು ಒಪ್ಪಂದದ ಪರ ಭಾರಿ ಬಹುಮತ ಖಚಿತವೆಂಬುಂದರ ಸೂಚಕವಾಗಿತ್ತು. ಮತದಾನದ ಸಮಯದಲ್ಲಿ ವಾಜಪೇಯಿ ಅವರು ಕೂಡ ಹಾಜರಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.