ADVERTISEMENT

50 ವರ್ಷಗಳ ಹಿಂದೆ: ಶನಿವಾರ 26.5.1973

ಪ್ರಜಾವಾಣಿ ವಿಶೇಷ
Published 25 ಮೇ 2023, 22:34 IST
Last Updated 25 ಮೇ 2023, 22:34 IST
50 ವರ್ಷಗಳ ಹಿಂದೆ ಈ ದಿನ
50 ವರ್ಷಗಳ ಹಿಂದೆ ಈ ದಿನ   

ಗೃಹಖಾತೆ ರಾಜ್ಯ ಸಚಿವ ಆರ್‌.ಡಿ.ಕಿತ್ತೂರರ ರಾಜೀನಾಮೆ ಅಂಗೀಕೃತ

ಬೆಂಗಳೂರು, ಮೇ 25– ತಮ್ಮ ಬಗೆಗೆ ಉಂಟಾದ ವಿವಾದವನ್ನನುಸರಿಸಿ ರಾಜ್ಯ ಸಚಿವ ಶ್ರೀ ರಘುನಾಥ್ ಧೂಳಪ್ಪ ಕಿತ್ತೂರು ಅವರು ಇಂದು ಬೆಳಿಗ್ಗೆ ಇತ್ತ ರಾಜೀನಾಮೆಯನ್ನು ಮುಖ್ಯಮಂತ್ರಿಗಳ ಶೀಫಾರಸಿನ ಮೇರೆಗೆ ರಾಜ್ಯಪಾಲರು ಅಂಗೀಕರಿಸಿದ್ದಾರೆ.

ವಿಧಾನ ಮಂಡಲದ ಉಭಯ ಸದನಗಳಲ್ಲಿ ಹಾಗೂ ಹೊರಗೂ ಕುತೂಹಲವನ್ನು ಕೆರಳಿಸಿದ ಪ್ರಕರಣ ಸಂಬಂಧಪಟ್ಟ ರಾಜ್ಯ ಸಚಿವರ ರಾಜೀನಾಮೆಯಲ್ಲಿ ಪರ್ಯಾವಸಾನವಾಯಿತು.

ADVERTISEMENT

ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳಿಗೆ ಕಳುಹಿಸಿದ ರಾಜಿನಾಮೆ ಪತ್ರದಲ್ಲಿ ಶ್ರೀ ಕಿತ್ತೂರು ಅವರು ತಮ್ಮನ್ನು ಭೇಟಿ ಮಾಡಿದ ಮಹಿಳೆಯೊಬ್ಬರ ಬಗ್ಗೆ ಪತ್ರಿಕೆಗಳಲ್ಲಿ ಹಾಗೂ ವಿಧಾನಮಂಡಲದಲ್ಲಿ ವಿವಾದ ಬೆಳೆದುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

––––

ಟೈರುಗಳಲ್ಲಿ ಕಾಳಸಂತೆ ತಪ್ಪಿಸಲು ನಿಯಂತ್ರಣ

ಬೆಂಗಳೂರು, ಮೇ 25– ಟೈರುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿದ ನಂತರ ನಿಯಂತ್ರಣ ತರಲಾಗಿದೆ ಎಂದು ಆಹಾರ ಸಚಿವೆ ಶ್ರೀಮತಿ ಇವಾವಾಜ್ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಶ್ರೀ ಎಂ.ವಿ.ವೆಂಕಟಪ್ಪ ಅವರ ಗೈರು ಹಾಜರಿಯಲ್ಲಿ ಶ್ರೀ ರಂಗಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಕಾಳಸಂತೆ ನಡೆಯುತ್ತಿರುವ ನಿರ್ದಿಷ್ಟ ಸಂದರ್ಭವನ್ನು ಸರ್ಕಾರದ ಗಮನಕ್ಕೆ ತಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ದೂರುಗಳು ಬಂದಿವೆ ಎಂದೂ, ಬಂದ ತಕ್ಷಣ ಆ ಬಗ್ಗೆ ವಿಚಾರಣೆ ಮಾಡಿ ಆನಂತರ ಕ್ರಮಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.