ಆರು ತಿಂಗಳ ಕಾಲ ರೈಲ್ವೆ ಮುಷ್ಕರ ನಿಷಿದ್ಧ ಕೇಂದ್ರದ ನಿರ್ಧಾರ
ನವದೆಹಲಿ, ಮೇ 26– ಭಾರತ ಸಂರಕ್ಷಣಾ ನಿಯಮಗಳ ಪ್ರಕಾರ ಭಾರತೀಯ ರೈಲ್ವೆಯಲ್ಲಿ ಮುಷ್ಕರವನ್ನು ಆರು ತಿಂಗಳ ಕಾಲ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ರೈಲ್ವೆ ಸಚಿವ ಎಲ್.ಎನ್.ಮಿಶ್ರಾ ಅವರು ಇಂದು ಇಲ್ಲಿ ಹೇಳಿದರು.
ಕ್ಷಾಮ ಪೀಡಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಸತತ ರವಾನೆಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಜೆ ಮಾಡಿದ ಆಕಾಶವಾಣಿ ಭಾಷಣದಲ್ಲಿ ಅವರು ತಿಳಿಸಿದರು.
ಚಳವಳಿ ಹೂಡಿರುವ ರೈಲ್ವೆ ಸಿಬ್ಬಂದಿಯ ಕೆಲವು ಕುಂದು ಕೊರತೆಗಳು ನಿಜವಾಗಿ ನ್ಯಾಯಯುತವಾಗಿರಬಹುದೆಂದು ಒಪ್ಪಿಕೊಂಡ ಅವರು, ಆದರೆ ರಾಷ್ಟ್ರದ ಪ್ರಸ್ತುರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು ಸಂಚಾರ ವ್ಯವಸ್ಥೆಗೆ ಧಕ್ಕೆ ತಗುಲದಂತೆ ವರ್ತಿಸುವಂತೆ ರೈಲ್ವೆ ಉದ್ಯೋಗಿಗಳಿಗೆ ಮನವಿ ಮಾಡಿಕೊಂಡರು.
====
ಸಂಪದ್ಭರಿತ ಮಲೆನಾಡು ಅಭಿವೃದ್ಧಿಗೆ ಕ್ರಮ ಅಗತ್ಯ: ಸುಖಾಡಿಯಾ
ಬೆಂಗಳೂರು, ಮೇ 26– ಸಂಪದ್ಭರಿತ ಮಲೆನಾಡು ಪ್ರದೇಶದ ಅಭಿವೃದ್ಧಿಯನ್ನು ರಾಜ್ಯದ ಹಾಗೂ ದೇಶದ ಹಿತದೃಷ್ಟಿಯಿಂದ ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ರಾಜ್ಯಪಾಲ ಶ್ರೀ ಮೋಹನ್ಲಾಲ್ ಸುಖಾಡಿಯಾ ಮತ್ತು ಕೇಂದ್ರ ಪ್ರವಾಸೋದ್ಯಮ ಸ್ಟೇಟ್ ಸಚಿವೆ ಡಾ. ಸರೋಜಿನಿ ಮಹಿಷಿ ಅವರು ಇಂದು ಇಲ್ಲಿ ಹೇಳಿದರು.
ಲಾಲ್ಬಾಗಿನ ಸ್ವರ್ಣ ಮಹೋತ್ಸವ ಭವನದಲ್ಲಿ ಮಲೆನಾಡು ಅಭಿವೃದ್ಧಿ ಕುರಿತಾದ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲರು ಮಲೆನಾಡಿನ ಸಮಸ್ಯೆ ಹಾಗೂ ಅಗತ್ಯಗಳ ಬಗ್ಗೆ ಎಚ್ಚರಿಕೆಯ ವಿಶ್ಲೇಷಣೆ ಹಾಗೂ ನಿಲುವು ಅಗತ್ಯ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.