ತಷ್ಕೆಂಟ್ ಘೋಷಣೆ ರದ್ದುಗೊಳಿಸಲು ದಿನೇಶ್ ಸಿಂಗ್ ನಕಾರ
ನವದೆಹಲಿ, ಡಿ. 10– ತಷ್ಕೆಂಟ್ ಘೋಷಣೆಯನ್ನು ಜಾರಿಗೆ ತರುವುದರಲ್ಲಿ ಪಾಕಿಸ್ತಾನ ಸರ್ಕಾರ ಸ್ವಲ್ಪವೂ ಸಹಕರಿಸುತ್ತಿಲ್ಲವಾದ ಕಾರಣ ಭಾರತವು ತಷ್ಕೆಂಟ್ ಘೋಷಣೆಯನ್ನು ‘ಮೃತ ಪತ್ರ’ವೆಂದು ಪರಿಗಣಿಸಿ ಅದನ್ನು ರದ್ದುಗೊಳಿಸಬೇಕೆಂಬ ಸಲಹೆಗಳನ್ನು ವಿದೇಶ ವ್ಯವಹಾರಗಳ ಸಚಿವ ಶ್ರೀ ದಿನೇಶ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ತಿರಸ್ಕರಿಸಿದರು.
ಪ್ರಜಾಸತ್ತೆಯೊ, ಸರ್ವಾಧಿಕಾರವೊ ಜನ ನಿರ್ಧರಿಸಲಿ ಎಂದು ಎಸ್ಸೆನ್
ಬೆಂಗಳೂರು, ಡಿ. 10– ಕಾಂಗ್ರೆಸ್ನಲ್ಲಿ ಇಂದು ಉಂಟಾಗಿರುವ ಬಿಕ್ಕಟ್ಟನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಸ್ವಾಗತಿಸಿ, ದೇಶ ಎತ್ತ ಸಾಗಬೇಕು ಎಂಬುದನ್ನು ಜನ ನಿರ್ಧರಿಸಲು ಇದರಿಂದ ಅವಕಾಶವಾಗಿದೆ ಎಂದರು. ‘ಸರ್ವಾಧಿಕಾರತ್ವದತ್ತ ಹೋಗಬೇಕೋ ಪ್ರಜಾಪ್ರಭುತ್ವ ಉಳಿಸಿಕೊಂಡು ಹೋಗಬೇಕೋ ಎಂದು ವಿಚಾರಮಂಥನ ನಡೆದು ಜನರು ನಿರ್ಧರಿಸಬೇಕು’ ಎಂದರು.
ಎಸ್ಸೆನ್ ನಮ್ಮ ನಾಯಕರು: ಮುಖ್ಯಮಂತ್ರಿ ಸ್ಪಷ್ಟನೆ
ಬೆಂಗಳೂರು, ಡಿ. 10– ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ತಮ್ಮ ನಾಯಕ ಶ್ರೀ ಎಸ್. ನಿಜಲಿಂಗಪ್ಪನವರೆಂದು ಇಂದು ಇಲ್ಲಿ ಮತ್ತೆ ಸ್ಪಷ್ಟಪಡಿಸಿದರು. ‘ಅವರ ನಾಯಕತ್ವವನ್ನು ಒಪ್ಪಿಕೊಂಡಿರುವುದು ಅನುಕೂಲಕ್ಕಾಗಿ ಅಲ್ಲ, ಇದನ್ನು ಆತ್ಮಸಾಕ್ಷಿಯಿಂದ ಹೇಳುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.