ADVERTISEMENT

50 ವರ್ಷಗಳ ಹಿಂದೆ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಲು ನಿರ್ಧಾರ

14–7–1972

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:37 IST
Last Updated 13 ಜುಲೈ 2022, 19:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಲು ನಿರ್ಧಾರ

ಬೆಂಗಳೂರು, ಜುಲೈ 13– ರಾಜ್ಯದಲ್ಲಿ ಹಿಂದುಳಿದವರನ್ನು ವರ್ಗೀಕರಿಸ‌ಲು ಆಧಾರಗಳನ್ನು ಸೂಚಿಸುವ ಐದು ಮಂದಿ ಸದಸ್ಯ ಆಯೋಗವೊಂದನ್ನು ಸರ್ಕಾರ ರಚಿಸಲಿದೆ.

ಈ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ದೇವರಾಜು ಅರಸು ಅವರು, ಆಯೋಗದಲ್ಲಿ 5 ಮಂದಿ ಸದಸ್ಯರಿರುವರೆಂದರು.

ADVERTISEMENT

ಆಯೋಗದ ಕಾರ್ಯ ಷರತ್ತುಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಯೆಂದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಬೇಕೆಂಬ ಒತ್ತಾಯ ಹಳೆಯದು. ವಿಧಾನಮಂಡಲದ ಪ್ರಸ್ತುತ ಅಧಿವೇಶನದಲ್ಲೂ ಈ ಒತ್ತಾಯನ್ನು ಮಾಡಲಾಯಿತು.

ಆರ್ಥಿಕ ಪರಿಸ್ಥಿತಿ ಹಾಗೂ ಜಾತಿಯ ಆಧಾರಗಳನ್ನು ಅಳವಡಿಸಿ ಹಿಂದುಳಿದವರ ವರ್ಗೀಕರಣ ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಶ್ರೀ ಅರಸು ಅವರು ವಿಧಾನಸಭೆಯಲ್ಲಿ ತಿಳಿಸಿದ್ದರು.

ಎಂಜಿನಿಯರುಗಳು ಸಲ್ಲಿಸುವ ಆಸ್ತಿ ವಿವರದ ತನಿಖೆಗೆ ಪ್ರತ್ಯೇಕ ವ್ಯವಸ್ಥೆ

ಬೆಂಗಳೂರು, ಜುಲೈ 13– ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳು ಕಾಲಕಾಲಕ್ಕೆ ಸರ್ಕಾರಕ್ಕೆ ನೀಡುವ ತಮ್ಮ ಆಸ್ತಿ ಪಾಸ್ತಿ ವಿವರ, ಅವರ ಆದಾಯ ಸಾಮರ್ಥ್ಯಕ್ಕೆ ಮೀರಿದೆಯೇ ಎಂಬುದನ್ನು ತನಿಖೆ ಮಾಡಲು ಸರ್ಕಾರ ಪ್ರತ್ಯೇಕ ವ್ಯವಸ್ಥೆಯೊಂದನ್ನು ಮಾಡಿದೆ.

1971ರ ವರ್ಷಕ್ಕೆ ಸಂಬಂಧಿಸಿದಂತೆ 219 ಎಕ್ಸಿಕ್ಯುಟಿವ್‌ ಎಂಜಿನಿಯರುಗಳ ಪೈಕಿ 142 ಮಂದಿ ಹಾಗೂ 10 ಮುಖ್ಯ ಎಂಜಿನಿಯರುಗಳ ಪೈಕಿ 4 ಮಂದಿ ಆಸ್ತಿ ವಿವರ ಸಲ್ಲಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಮಂತ್ರಿ ಶ್ರೀ ಎಚ್‌.ಎಂ. ಚನ್ನಬಸಪ್ಪ ಅವರು ಇಂದು ವಿಧಾನಸಭೆಯ‌ಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.