ವಾಟಾಳ್, ಬಂಗಾರಪ್ಪ ಅವರಿಗೆ ದೆಹಲಿಯಲ್ಲಿ ನ್ಯಾಯಾಧೀಶರ ಎಚ್ಚರಿಕೆ
ನವದೆಹಲಿ, ಡಿ. 2– ಮಹಾಜನ್ ವರದಿ ಜಾರಿಗೆ ತರಬೇಕೆಂದು ಒತ್ತಾಯಪಡಿಸಿ ಕಳೆದ ಮಾರ್ಚ್ನಲ್ಲಿ ಪಾರ್ಲಿಮೆಂಟ್ ಮುಂದೆ ಪ್ರದರ್ಶನ ಮಾಡಿದ ಸಂಬಂಧದಲ್ಲಿ ಮೈಸೂರು ವಿಧಾನಸಭಾ ಸದಸ್ಯರಾದ ವಾಟಾಳ್ ನಾಗರಾಜ್ ಮತ್ತು ಎಸ್. ಬಂಗಾರಪ್ಪ ಅವರನ್ನು ದೆಹಲಿ ಮ್ಯಾಜಿಸ್ಟ್ರೇಟ್ ಅವರು ಇಂದು ಎಚ್ಚರಿಕೆ ನೀಡಿದ ನಂತರ ಬಿಡುಗಡೆ ಮಾಡಿದರು.
ಮಹಾಜನ್ ವರದಿಯನ್ನು ತಡ ಮಾಡದಂತೆ ಕಾರ್ಯಗತಗೊಳಿಸಬೇಕೆಂದು ವಿಮುಕ್ತಿ ನಂತರ ಇಬ್ಬರೂ ಸದಸ್ಯರು ಜಂಟಿ ಹೇಳಿಕೆಯಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರನ್ನು ಒತ್ತಾಯಪಡಿಸಿದರು.
ಗಡಿ ವಿವಾದದಲ್ಲಿ ಮೈಸೂರು ನಿಲುವಿಗೆ ಬೆಂಬಲ ಕೋರಲು ಅವರು ಎಲ್ಲಾ ಪಕ್ಷಗಳಿಗೆ ಸೇರಿದ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿ ಮಾಡಿದರು.
ನಾಪತ್ತೆಯಾಗಿರುವ ಸಬ್ ಇನ್ಸ್ಪೆಕ್ಟರ್ ಪತ್ತೆಗೆ ಸುಳಿವು ನೀಡಿದವರಿಗೆ 250 ರೂ. ಬಹುಮಾನ
ಕಲಬುರ್ಗಿ, ಡಿ. 2– ಹೊಸಪೇಟೆ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಿಂದ ಕಳೆದ ತಿಂಗಳು ನಾಪತ್ತೆಯಾಗಿರುವ, ಕೇಂದ್ರ ತನಿಖಾ ವಿಭಾಗದ ವಿಶೇಷ ಪೊಲೀಸ್ ಪಡೆಗೆ ಸೇರಿದ ಸಬ್ ಇನ್ಸ್ಪೆಕ್ಟರ್ ಶ್ರೀ ಸಿಡ್ನಿ ಚಾರ್ಲ್ಸ್ ಅವರ ಪತ್ತೆಗೆ ಸಹಾಯಕವಾದ ಸುದ್ದಿ ಇಲ್ಲವೇ ಸುಳಿವು ನೀಡುವವರಿಗೆ 250 ರೂ. ಬಹುಮಾನ ನೀಡುವುದಾಗಿ ಬಳ್ಳಾರಿ ಪೊಲೀಸ್ ಸೂಪರಿಂಟೆಂಡೆಂಟ್ ಅವರು ಪ್ರಕಟಿಸಿದ್ದಾರೆಂದು ಇಂದು ಇಲ್ಲಿಗೆ ಬಂದ ಸುದ್ದಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.