ಅವಿಭಾಜ್ಯ ಆಂಧ್ರಕ್ಕೇ ಬೆಂಬಲ: ಬ್ರಹ್ಮಾನಂದರೆಡ್ಡಿ ಅವರಲ್ಲಿ ಆಂಧ್ರ ಕಾಂಗ್ರೆಸ್ ಶಾಸಕರ ವಿಶ್ವಾಸ
ಹೈದರಾಬಾದ್, ಜುಲೈ6– ಆಂಧ್ರ ಪ್ರದೇಶದ ಶಾಸನಸಭಾ ಕಾಂಗ್ರೆಸ್ ಪಕ್ಷವು ಇಂದು ಇಲ್ಲಿ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರಲ್ಲಿ ಸರ್ವಾನುಮತದಿಂದ ತನ್ನ ಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿತು.
ರಾಜ್ಯದಲ್ಲಿ ಮತ್ತೆ ಮಾಮೂಲಿನ ಪರಿಸ್ಥಿತಿ ಉಂಟಾಗುವತನಕ ಮುಖ್ಯಮಂತ್ರಿ ಪದವಿಯಲ್ಲೇ ಮುಂದುವರಿದು ಅಂತಿಮವಾಗಿ ತೆಲಂಗಾಣ ಪ್ರದೇಶದವರೊಬ್ಬರು ನಾಯಕತ್ವವನ್ನು ವಹಿಸಿಕೊಳ್ಳುವಂತೆ ದಾರಿ ಮಾಡಿಕೊಡಬೇಕೆಂದೂ ಶ್ರೀ ಬ್ರಹ್ಮಾನಂದರೆಡ್ಡಿ ಅವರನ್ನು ಕೋರಿಕೊಳ್ಳಲಾಯಿತು.
ಸೈನಿಕ ಸಾಮಗ್ರಿಯಿದ್ದ ಗೂಡ್ಸ್ಟ್ರೈನ್ ಲೂಟಿ: ಇಬ್ಬರ ಬಂಧನ
ಕಲ್ಕತ್ತ, ಜುಲೈ 6– ಪೂರ್ವ ರೈಲ್ವೆಯ ರಾಣಿಗಂಜ್ ಮತ್ತು ಬೈಕ್ತನಗೋರ ಛಲು ನಿಲ್ದಾಣಗಳ ನಡುವೆ ಸೈನಿಕ ಸಾಮಗ್ರಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ಮಿಲಿಟರಿ ಗೂಡ್ಸ್ ಟ್ರೈನೊಂದನ್ನು ಗುರುತಿಸಿದ ವ್ಯಕ್ತಿಗಳು ಇಂದು ಬೆಳಿಗ್ಗೆ ಲೂಟಿ ಮಾಡಿದರು ಎಂದು ಇಲ್ಲಿಯ ಸೈನ್ಯದ ಕಚೇರಿಗೆ ವರದಿ ಬಂದಿದೆ.
ರೈಲ್ವೆ ಹಾದಿಯ ಮೇಲೆ ದೊಡ್ಡ ಕಲ್ಲುಗಳನ್ನಿಟ್ಟು ಟ್ರೈನನ್ನ ನಿಲ್ಲಿಸಿ ಅವರು ಲೂಟಿ ಮಾಡಿದರೆಂದೂ ಹೇಳಲಾಗಿದೆ.
ರಾಜ್ಯ ಇಬ್ಭಾಗವಾಗುವುದನ್ನು ತಾವು ವಿರೋಧಿಸುವುದಾಗಿ ಸಚಿವ ಶ್ರೀ ಬಿ. ರಾಚಯ್ಯ
ಮೈಸೂರು, ಜುಲೈ 6– ರಾಜ್ಯದ ಯಾವುದಾದರೊಂದು ಪ್ರದೇಶ ಅಥವಾ ಒಂದು ಪಂಗಡಕ್ಕೆ ಅನ್ಯಾಯವಾಗಿದ್ದರೆ ಅದರ ನಿವಾರಣೆಗಾಗಿ ತಾವು ಹೋರಾಟ ಮಾಡಲು ಸಿದ್ಧವಿರುವುದಾಗಿಯೂ ಆದರೆ ಮೈಸೂರು ಎರಡು ರಾಜ್ಯವಾಗುವುದನ್ನು ತಾವು ಖಂಡಿತಾ ಒಪ್ಪುವುದಿಲ್ಲವೆಂದೂ ರಾಜ್ಯದ ವ್ಯವಸಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ಇಲ್ಲಿ ಘೋಷಿಸಿದರು.
ಈಗಲ್ – ಚಂದ್ರನಲ್ಲಿ ಇಳಿವ ಮಾನವ ಸಹಿತನೌಕೆ
ಹೂಸ್ಟನ್, ಜುಲೈ 6– ಚಂದ್ರಗ್ರಹದಲ್ಲಿ ಮಾನವಸಹಿತ ಇಳಿಯುವ ಮೊದಲ ಬಾಹ್ಯಾಕಾಶ ನೌಕೆಯ ಹೆಸರು ‘ಈಗಲ್’ ಚಂದ್ರ ಗ್ರಹದ ಸುತ್ತ ಕಕ್ಷಾಪಥದಲ್ಲಿ ಸಂಚರಿಸುವ ಸಹ ನೌಕೆಯ ಹೆಸರು ‘ಕೊಲಂಬಿಯಾ’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.