ADVERTISEMENT

ಪಕ್ಷದ ನಾಯಕತ್ವಕ್ಕಾಗಿ ಇಂದಿರಾ, ಸಿಂಡಿಕೇಟ್ ಹೋರಾಟ ಖಚಿತ

ಮಂಗಳವಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 18:27 IST
Last Updated 1 ಸೆಪ್ಟೆಂಬರ್ 2019, 18:27 IST

ಪಕ್ಷದ ನಾಯಕತ್ವಕ್ಕಾಗಿ ಇಂದಿರಾ, ಸಿಂಡಿಕೇಟ್ ಹೋರಾಟ ಖಚಿತ

ನವದೆಹಲಿ, ಸೆ. 1– ಕಾಂಗ್ರೆಸ್ ವ್ಯವಹಾರ ವಿಭಜನೆಯ ದುಷ್ಪರಿಣಾಮಕ್ಕೊಳಗಾಗಿದೆ. ಪರಾಜಿತ ಸಿಂಡಿಕೇಟಿಗೆ ಸಂಸ್ಥೆಯ ಮೇಲಿನ ಹತೋಟಿಯನ್ನು ಬಿಟ್ಟುಕೊಡಲು ಇಷ್ಟವಿಲ್ಲ.

ಅಂತೆಯೇ ಬ್ಯಾಂಕ್ ರಾಷ್ಟ್ರೀಕರಣ ಪ್ರಕರಣದಿಂದ ಪಕ್ಷದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ‘ಯಜಮಾನರು’ ಗಳಿಗೆ ಅವಕಾಶ ನೀಡುತ್ತಿಲ್ಲ. ಎರಡೂ ಗುಂಪುಗಳು ಏಕತೆಯ ಘೋಷಣೆಯನ್ನೇ ಪದೇ ಪದೇ ಕೂಗುತ್ತಿದ್ದರೂ ತಮ್ಮ ತಮ್ಮ ನಿಲುವನ್ನು ಸಂಘಟಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ADVERTISEMENT

ಲಿಬಿಯಾದಲ್ಲಿ ಸೇನಾ ಕ್ರಾಂತಿ

ರೋಮ್, ಸೆ. 1– ಲಿಬಿಯಾದಲ್ಲಿ ಸೇನಾಕ್ರಾಂತಿ ನಡೆದು ಸರ್ಕಾರವನ್ನು ಸೇನೆ ವಹಿಸಿಕೊಂಡು ಗಣರಾಜ್ಯವನ್ನು ಘೋಷಿಸಿದೆ ಎಂದು ಇಟಾಲಿಯಾ ಸುದ್ದಿ ಸಂಸ್ಥೆ ಇಂದು ವರದಿ ಮಾಡಿದೆ.

ದೊರೆ ಇಡ್ರಿಸ್ ಅವರು ತುರ್ಕಿಯಲ್ಲಿ ವಿಹಾರದಲ್ಲಿದ್ದಾಗ ಈ ಕ್ಷಿಪ್ರ ಕ್ರಾಂತಿ ನಡೆದಿದೆ ಎಂದು ಅದು ಹೇಳಿದೆ.

ಕರ್ನಲ್ ಬಷೀರ್ ಇತರ ಸೇನಾ ಅಧಿಕಾರಿಗಳ ನೇತೃತ್ವದಲ್ಲಿ ಕ್ರಾಂತಿಕಾರಿ ಮಂಡಳಿಯನ್ನು ರಚಿಸಲಾಗಿದೆ
ಎಂದು ಲಂಡನ್ನಿನಲ್ಲಿ ಬಲ್ಲ ಮೂಲಗಳು ತಿಳಿಸಿವೆ.

ಬ್ರೆಜಿಲ್ ಆಡಳಿತ ಸೇನೆಯ ವಶಕ್ಕೆ: ಅಧ್ಯಕ್ಷರಿಗೆ ಅನಾರೋಗ್ಯ

ರಿಯೊ ಡಿ ಜನೈರೊ, ಸೆ. 1– ಭಾನುವಾರ ಬ್ರೆಜಿಲ್ ಅಧ್ಯಕ್ಷ ಆರ್ಥರ್ ಡಕಾಸ್ಟ ಈ ಸಿಲ್ವಾ ಅವರಿಗೆ ಪಾರ್ಶ್ವವಾಯು ತಗುಲಿದ ಕಾರಣ ಸೈನ್ಯ ಪಡೆಗಳ ದಂಡನಾಯಕರು ದೇಶದ ಆಡಳಿತವನ್ನು ತಮ್ಮ ಹತೋಟಿಗೆ ತೆಗೆದುಕೊಂಡರು.

ಅಧ್ಯಕ್ಷರಿಗೆ ಪಾರ್ಶ್ವವಾಯು ತಗುಲಿ ಮಿದುಳಿಗೆ ಅಪಾಯವುಂಟಾಗಿರುವುದರಿಂದ ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ಸರ್ಕಾರದ ಹತೋಟಿಯಲ್ಲಿರುವ ರಾಷ್ಟ್ರೀಯ ವಾರ್ತಾ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.