ದಾವಣಗೆರೆಯಲ್ಲಿ ಪ್ರತಿನಿತ್ಯ ಕಳ್ಳತನಕ್ಕೆ ಪೊಲೀಸರೇ ಕಾರಣ: ಶಿವಾನಂದಸ್ವಾಮಿ ಆಪಾದನೆ
ಬೆಂಗಳೂರು, ಸೆ. 25– ದಾವಣಗೆರೆಯಲ್ಲಿ ‘ಪ್ರತಿನಿತ್ಯ ಪೊಲೀಸರೇ’ ಕಳ್ಳತನ ಮಾಡಿಸುತ್ತಿದ್ದಾರೆಂದು ಮೇಲ್ಮನೆಯಲ್ಲಿ ಸಂಯುಕ್ತ ವಿಧಾಯಕದಳದ ನಾಯಕರಾದ ಶ್ರೀ ಶಿವಾನಂದಸ್ವಾಮಿಯವರು ಇಂದು ಆಪಾದಿಸಿದರು.
ದರೋಡೆ ಬಗ್ಗೆ ತಾವು ನಿಲುವಳಿ ಸೂಚನೆಯೊಂದನ್ನು ಕಳುಹಿಸಿದ್ದು ಅದನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯಪಡಿಸಿದ ಶ್ರೀ ಶಿವಾನಂದಸ್ವಾಮಿಯವರು ಈಗ ಒಬ್ಬ ‘ಒಳ್ಳೆಯ’ ಸರ್ಕಲ್ ಇನ್ಸ್ಪೆಕ್ಟರ್ ಇದ್ದು ಅವರನ್ನು ಅಲ್ಲಿಂದ ಕಳುಹಿಸಲು ಅವರ ಕೈಕೆಳಗಿನ ನೌಕರರು ಮತ್ತಿತರರು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಹದಿನೈದು ವರ್ಷಗಳಲ್ಲಿ ಕನ್ನಡ ವಿಶ್ವಕೋಶ ಸಿದ್ಧ: ಶಂಕರಗೌಡ
ಬೆಂಗಳೂರು, ಸೆ. 25– ಸರ್ಕಾರದ ವೆಚ್ಚದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸಿದ್ಧಪಡಿಸುತ್ತಿರುವ ಕನ್ನಡ ವಿಶ್ವಕೋಶದ ಕಾರ್ಯ ಇನ್ನು 15 ವರ್ಷಗಳಲ್ಲಿ ಪೂರ್ಣಗೊಳ್ಳುವುದೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಶ್ರೀ ಎಂ.ವಿ.ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಶ್ವಕೋಶವನ್ನು ಸಿದ್ಧಪಡಿಸಲು ಸುಮಾರು 90 ಲಕ್ಷ ರೂ ವೆಚ್ಚ ತಗಲುವುದೆಂದೂ ಪ್ರತೀ ಸಂಪುಟದ ಬೆಲೆ ಎಪ್ಪತ್ತು ರೂ.ಗಳೆಂದು ನಿಗದಿಗೊಳಿಸಲಾಗುವುದೆಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.