ಮೂಢ ಸಂಪ್ರದಾಯ ಹತ್ತಿಕ್ಕಲು ನಾಂದಿ: ಮಾದರಿ ವಿವಾಹ
ವಿಶೇಷ ಪ್ರತಿನಿಧಿಯಿಂದ, ಜೂನ್ 8– ಮೂಢ ಸಂಪ್ರದಾಯ ವಿರೋಧಿ ಸಮ್ಮೇಳನವೇ ಶುಭ ಸಂದರ್ಭ, ಶುಭ ಮುಹೂರ್ತ. ಮಾರಿಯಮ್ಮನ ಗುಡಿಯ ಬಯಲೇ ಕಲ್ಯಾಣ ಮಂಟಪ, ಸುತ್ತಮುತ್ತಲ ಹಳ್ಳಿಗಳಿಂದ ಬಂದಿದ್ದ ಐದು ಸಾವಿರಕ್ಕಿಂತ ಹೆಚ್ಚು ಮಂದಿ ಪುರುಷರು, ಮಹಿಳೆಯರೇ ‘ಹತ್ತು ಸಮಸ್ತರು.’ ನೆರೆದಿದ್ದವರ ಕರತಾಡನವೇ ಆರತಿ–ಅಕ್ಷತೆ ಹಾಗೂ ಆಶೀರ್ವಾದ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹರಿಜನ ಕೆ.ಎಚ್. ರಂಗನಾಥ್ ಅವರದ್ದೇ ಪೌರೋಹಿತ್ಯ. ಅಭಿವೃದ್ಧಿ ಸಚಿವ, ಮತ್ತೊಬ್ಬ ಹರಿಜನ ಎಂ.ಮಲ್ಲಿಕಾರ್ಜುನ ಸ್ವಾಮಿ ಅವರು ಉದ್ಘಾಟಿಸಿದುದೇ ಮಂಗಳವಾದ್ಯ.
ಈ ಮೂಲಕ, ಚನ್ನಪಟ್ಟಣ ತಾಲ್ಲೂಕಿನ ನಾಗವಾರದಲ್ಲಿ ಕಾಳೇಗೌಡ ಮತ್ತು ಕೆಂಪಮ್ಮ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಅಗತ್ಯ ಆಧರಿಸಿ ಆಸ್ತಿ ಮಿತಿ ನಿರ್ಧಾರ
ಪುಣೆ, ಜೂನ್ 8– ನಗರ ಆಸ್ತಿ ಮೇಲೆ ಮಿತಿ ನಿರ್ಧರಿಸುವುದಕ್ಕೆ ಆಸ್ತಿಯ ಬೆಲೆಗಿಂತ ಅಗತ್ಯವೇ ಮಾನದಂಡವಾಗಿರಬೇಕು ಎಂದು ಯೋಜನಾ ಆಯೋಗ ಅಭಿಪ್ರಾಯಪಟ್ಟಿದೆ.
‘ಆಸ್ತಿ ಅಂದಾಜಿಸುವಲ್ಲಿ ಬೆಲೆಯನ್ನೇ ಆಧಾರವಾಗಿಡುವುದು ಅವೈಜ್ಞಾನಿಕ. ಇದರಿಂದ ಉದ್ದೇಶ ಈಡೇರದು’ಎಂದು ಯೋಜನಾ ಶಾಖೆ ರಾಜ್ಯ ಸಚಿವ ಮೋಹನಧಾರಿಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.