ಬಂಗಾಳ ಪೊಲೀಸ್ ಠಾಣೆಗೆ ಸೈನ್ಯದ ಕಾವಲು: 5 ಸಾವು
ಕಲ್ಕತ್ತ, ಫೆ. 25– ಪಶ್ಚಿಮ ಬಂಗಾಳದ ಪೊಲೀಸ್ ಠಾಣೆಗಳಲ್ಲಿ ಸೈನ್ಯ ಪಡೆಗಳನ್ನು ಕಾವಲಿಗೆ ಇಟ್ಟಿರುವುದಾಗಿ ಅಧಿಕೃತ ವಲಯಗಳಿಂದ ಗೊತ್ತಾಗಿದೆ. ಚುನಾವಣೆ ಸಂಬಂಧದ ಕೆಲಸಗಳಿಗೆ ಪೊಲೀಸರನ್ನು ಒದಗಿಸುವುದು ಹಾಗೂ ಈಚೆಗೆ ರೈಫಲ್ಗಳನ್ನು ಶಸ್ತ್ರಸಜ್ಜಿತರು ಕಸಿದುಕೊಂಡು ಹೋದುದರಿಂದ ಠಾಣೆಗಳಿಗೆ ರಕ್ಷಣೆ ನೀಡುವುದು ಈ ಕ್ರಮದ ಉದ್ದೇಶ.
ಐದು ಜನರ ಸಾವು: ಇಬ್ಬರು ಉಗ್ರವಾದಿ ಕೈದಿಗಳೂ ಸೇರಿ ಒಟ್ಟು ಐದು ಜನ ಕಲ್ಕತ್ತ ನಗರ ಮತ್ತು ಪಶ್ಚಿಮ ಬಂಗಾಳದ
ಇತರ ಜಿಲ್ಲೆಗಳಲ್ಲಿ ಹಿಂಸಾಕೃತ್ಯಗಳಿಂದ ಈ ದಿನ ಸತ್ತರು. ಹತ್ತು ಜನ ಗಾಯಗೊಂಡಿದ್ದಾರೆ.
ನಿರ್ಧಾರ ಅಚಲವಾದರೆ ಅಧ್ಯಯನ ತಂಡದಿಂದ ಭಾರತದ ನಿರ್ಗಮನ
ನವದೆಹಲಿ, ಫೆ. 25– ದಕ್ಷಿಣ ಆಫ್ರಿಕಾಕ್ಕೆ ಶಸ್ತ್ರಾಸ್ತ್ರಗಳನ್ನು ಮಾರುವ ಬ್ರಿಟನ್ ನಿರ್ಧಾರದಿಂದ ಉದ್ಭವಿಸಿರುವ ಹೊಸ ಪರಿಸ್ಥಿತಿಯಲ್ಲಿ ಭಾರತವು ಎಂಟು ಸದಸ್ಯ ರಾಷ್ಟ್ರಗಳ ಕಾಮನ್ವೆಲ್ತ್ ಅಧ್ಯಯನ ತಂಡ ತ್ಯಜಿಸುವುದೆಂದು ವಿದೇಶಾಂಗ ಸಚಿವ ಶ್ರೀ ಸ್ವರಣ್ಸಿಂಗ್ ಅವರು ಇಂದು ಇಂಗಿತ ಕೊಟ್ಟಿದ್ದಾರೆ.
ಬ್ರಿಟಿಷ್ ನಿರ್ಧಾರ ಆಖೈರು ಮತ್ತು ಅಚಲವಾದರೆ ಅಧ್ಯಯನ ತಂಡದ ಸಮಾವೇಶ ವೃಥಾ ಶ್ರಮವಾಗುವುದೆಂಬ ಭಾರತದ ಹೇಳಿಕೆ ಬ್ರಿಟನ್ನಿಗೆ ಕಟ್ಟಕಡೆಯ ಎಚ್ಚರಿಕೆ ಎಂದು ರಾಜತಾಂತ್ರಿಕ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.