ಗಣರಾಜ್ಯ ದಿನಕ್ಕೆ ಮುಂಚೆ ಪ್ರತ್ಯೇಕ ಆಂಧ್ರ ರಾಜ್ಯ: ಇಲ್ಲವೆ ಪಕ್ಷ ತ್ಯಾಗ
ವಿಜಯವಾಡ, ಜ. 10– ಜನವರಿ 26ರೊಳಗಾಗಿ ಪ್ರತ್ಯೇಕ ಆಂಧ್ರ ರಾಜ್ಯ ಈಡೇರಿಸದೇ ಹೋದಲ್ಲಿ ತಾವುಗಳು ಸಾಮೂಹಿಕವಾಗಿ ಪಕ್ಷ ತ್ಯಜಿಸುವುದಾಗಿ ಆಂಧ್ರ ವಿಭಾಗದ ಹದಿನೈದು ಮಂದಿ ಸಂಸತ್ ಕಾಂಗ್ರೆಸ್ ಸದಸ್ಯರು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ತೆನಾಲಿಯಲ್ಲಿ ನಡೆದ ಸಂಸತ್ ಸದಸ್ಯರ ಅಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಸಭೆಯಲ್ಲಿ ಭಾಗವಹಿಸಿದ್ದ ಕೆ.ಸೂರ್ಯನಾರಾಯಣ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಜನತೆಯ ಅಭಿಲಾಷೆಗನುಗುಣವಾಗಿ ಆಂಧ್ರಪ್ರದೇಶ ವಿಭಜನೆ ಹೊರತು ಬೇರೆ ಮಾರ್ಗವಿಲ್ಲವೆಂದು ಅವರು ಹೇಳಿದರು.
ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಭಾರತ–ಜಪಾನ್ ಸಹಕಾರ: ಸ್ವರಣ್ ಭೇಟಿಯ ಫಲ
ಟೋಕಿಯೊ, ಜ. 10– ಜಪಾನ್ ವಿದೇಶಾಂಗ ಸಚಿವ ಮಾಸಯೋಷಿ ಓಹಿರಾ ಅವರೊಡನೆ ನಡೆಸಿದ ಮಾತುಕತೆಗಳಿಂದ ಸತೃಪ್ತವಾಗಿ ಭಾರತದ ವಿದೇಶಾಂಗ ಸಚಿವ ಸರ್ದಾರ್ ಸ್ವರಣ್ ಸಿಂಗ್ ಅವರು ಇಂದು ಇಲ್ಲಿಂದ ಪ್ರಯಾಣ ಮಾಡಿದರು.
ಆರ್ಥಿಕ ರಂಗದಲ್ಲಿ ಉಭಯ ರಾಷ್ಟ್ರಗಳೂ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳಬಹುದೆಂದು ಭಾರತ ಈಚೆಗೆ ಸೂಚಿಸಿತು.
ಸಿಂಗ್ ಮತ್ತು ಓಹಿರಾ ಅವರು ಜಪಾನ್ ತಾಂತ್ರಿಕ ತಿಳಿವಳಿಕೆ ಮತ್ತು ಆರ್ಥಿಕ ಪಾಲುದಾರಿಕೆಗಳ ಅಗತ್ಯವಿರುವ ಕೆಲವು ನಿರ್ದಿಷ್ಟ ಯೋಜನೆಗಳನ್ನು ಆಲೋಚಿಸಿಕೊಂಡಿರುವುದಾಗಿ ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.