ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಶನಿವಾರ, 17–10–1970

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 19:32 IST
Last Updated 16 ಅಕ್ಟೋಬರ್ 2020, 19:32 IST
   

ರಾಜ್ಯಪಾಲರ ವಿರುದ್ಧ ಹಕ್ಕುಲೋಪ ಸೂಚನೆ: 19ರಂದು ರೂಲಿಂಗ್

ಬೆಂಗಳೂರು, ಅ. 16– ಶಾಸನಸಭೆಗಳ ಕಾರ್ಯವೈಖರಿಯ ಬಗ್ಗೆ ರಾಜ್ಯಪಾಲರು ಈಚೆಗೆ ಮಂಗಳೂರಿನಲ್ಲಿ ಆಡಿದರೆನ್ನ ಲಾದ ನುಡಿಗಳು ‘ವಿಧಾನಸಭೆಗೆ ಅವಮಾನ ಹಾಗೂ ತಮ್ಮ ಹಕ್ಕುಬಾಧ್ಯತೆ ಗಳಿಗೆ ಚ್ಯುತಿ ತಂದಿವೆ’ ಎಂದು ವಾದಿಸಿ ಆಡಳಿತ ಕಾಂಗ್ರೆಸ್ ಸದಸ್ಯರು ಇಂದು ಶ್ರೀ ಧರ್ಮವೀರ ಅವರ ವಿರುದ್ಧ ಅಧ್ಯಕ್ಷರಿಗೆ ಹಕ್ಕುಲೋಪ ಸೂಚನೆ ಕಳುಹಿಸಿದ್ದಾರೆ.

ಮೈಸೂರು ವಿಧಾನಮಂಡಲದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉದ್ಭವವಾಗುತ್ತಿರುವ ಈ ರೀತಿಯ ಸೂಚನೆಯ ಅಂಗೀಕಾರಾರ್ಹತೆಯ ಬಗ್ಗೆ ಸೋಮವಾರ ‘ರೂಲಿಂಗ್‌’ ನೀಡುವುದಾಗಿ ಅಧ್ಯಕ್ಷ ಶ್ರೀ ಕೊಠಾವಳೆ ಅವರು, ಸುಮಾರು ಒಂದೂಕಾಲು ಗಂಟೆಯ ಚರ್ಚೆಯ ಕೊನೆಯಲ್ಲಿ ತಿಳಿಸಿದರು.

ADVERTISEMENT

‘ಹೊಸಪೇಟೆ ಪ್ರಾಥಮಿಕ ಶಾಲೆಗಳ ಹೆಸರು ಬದಲಾಯಿಸಿಲ್ಲ’

ಬೆಂಗಳೂರು, ಅ. 16– ಹೊಸಪೇಟೆ ಪಟ್ಟಣದ ಪ್ರಾಥಮಿಕ ಶಾಲೆಗಳಿಗೆ ಇಡಲಾಗಿದ್ದ ರಾಷ್ಟ್ರೀಯ ನಾಯಕರ ಹೆಸರನ್ನು ಬದಲಾಯಿಸಿಲ್ಲ ಎಂದು ಶಿಕ್ಷಣದ ಉಪಮಂತ್ರಿ ಶ್ರೀ ಎನ್‌.ಎಂ.ಕೆ. ಸೋಗಿ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಶ್ರೀ ಬಿ. ಸತ್ಯನಾರಾಯಣ ಸಿಂಗ್ ಅವರ ಗಮನ ಸೆಳೆಯುವ ಸೂಚನೆಗೆ ಹೇಳಿಕೆ ನೀಡಿದ ಶ್ರೀ ಸೋಗಿ ಅವರು
‘ಈ ಶಾಲೆಗಳನ್ನು ಸರ್ಕಾರ ವಹಿಸಿಕೊಂಡಿರುವುದರಿಂದ ಶಾಲೆಗಳಿಗೆ ‘ಸರ್ಕಾರಿ’ಎಂಬ ಪದವನ್ನು ಸೇರಿಸಲಾಗಿದೆಯಲ್ಲದೆ, ಬೇರೆ ಯಾವ ರೀತಿಯಲ್ಲಿಯೂ ಹೆಸರುಗಳನ್ನು ಬದಲಾಯಿಸಿಲ್ಲ. ರಾಷ್ಟ್ರ ನಾಯಕರ ಹೆಸರುಗಳು ಹಾಗೆಯೇ ಇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.