ಮತದಾರನಾಗುವುದು ಪ್ರಯಾಸ
ಬೆಂಗಳೂರು, ಜ. 12– ಹತ್ತು ಪೈಸೆ ಪಾವತಿಸಿ ಮತದಾರನಾಗಿ ಎಂದು ಕೇಂದ್ರ ಸರ್ಕಾರವು ಪೌರರಿಗೆ ಮೇಲಿಂದ ಮೇಲೆ ಹೇಳುತ್ತಿದ್ದರೂ ಮತದಾರನಾಗಿ ರಿಜಿಸ್ಟರ್ ಆಗುವುದು ಸುಲಭವಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವಷ್ಟೇ ಕಷ್ಟವಾಗಿದೆ.
ನಿಮ್ಮ ಕ್ಷೇತ್ರದ ಚುನಾವಣೆ ರಿಜಿಸ್ಟ್ರೇಷನ್ ಅಧಿಕಾರಿ ಯಾರೆಂಬುದನ್ನು ಪತ್ತೆ ಮಾಡುವುದು ಮೊದಲ ಹೆಜ್ಜೆ. ಅವರು ಬೆಂಗಳೂರು ಕಾರ್ಪೊರೇಷನ್ನಿನ ಡೆಪ್ಯುಟಿ ಕಮಿಷನರ್. ಇದನ್ನು ತಿಳಿದು ಕಾರ್ಪೊರೇಷನ್ ಕಚೇರಿಗೆ ಹೋದರೆ ಅವರೇ ಇರುವುದಿಲ್ಲ. ವಿಚಾರಿಸಿದರೆ ಈ ಕಾರ್ಯಕ್ಕಾಗಿ ಒಬ್ಬ ಗುಮಾಸ್ತರಿರುವುದು ಗೊತ್ತಾಗುತ್ತದೆ. ಈ ಗುಮಾಸ್ತರಿಗೆ ಎಷ್ಟು ಕೆಲಸವೆಂದರೆ, ಅರ್ಜಿಯ ಪ್ರತಿಗಳನ್ನು ಮಾರಲೂ ಇವರಿಗೆ ಸಾಕಷ್ಟು ಸಮಯವಿಲ್ಲ.
ಚುನಾವಣೆ ಸಂಕೇತ: ‘ನೊಗ ಹೊತ್ತ ಜೋಡಿ ಎತ್ತು’ ಆಡಳಿತ ಕಾಂಗ್ರೆಸ್ಸಿಗೆ
ನವದೆಹಲಿ, ಜ. 12– ಶ್ರೀ ಜಗಜೀವನರಾಂ ಅವರು ಅಧ್ಯಕ್ಷರಾಗಿರುವ ಆಡಳಿತ ಕಾಂಗ್ರೆಸ್ಸಿಗೆ ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ ಎಂದು ಪ್ರಧಾನ ಚುನಾವಣೆ ಕಮಿಷನರ್ ಶ್ರೀ ಎಸ್.ಪಿ.ಸೇನ್ವರ್ಮಾ ಅವರು ಇಂದು ಮಾನ್ಯತೆ ನೀಡಿ, ಮೊದಲ ಮಹಾಚುನಾವಣೆಗಳಿಂದ ಅವಿಭಕ್ತ ಕಾಂಗ್ರೆಸ್ಸಿನದಾಗಿದ್ದ ‘ನೊಗ ಹೊತ್ತ ಜೋಡಿ ಎತ್ತುಗಳ’ ಚುನಾವಣೆ ಸಂಕೇತವನ್ನು ಅದಕ್ಕೆ ನೀಡಿದರು.
ಶ್ರೀ ನಿಜಲಿಂಗಪ್ಪನವರು ಅಧ್ಯಕ್ಷರಾಗಿರುವ ಸಂಸ್ಥಾ ಕಾಂಗ್ರೆಸ್ಸಿಗೆ ‘ರಾಷ್ಟ್ರೀಯ ಪಕ್ಷ’ ಎಂದೂ ಪ್ರಧಾನ ಚುನಾವಣೆ ಕಮಿಷನರ್ ಮಾನ್ಯತೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.